ಗುರುವಾರ, ಜುಲೈ 20, 2017

ನಿರಾಕರಣ


ಪಡುವಣದಲ್ಲಿ ಸೂರ್ಯನು ಬಿಟ್ಟುಹೋದ ಕೆಂಪು ಕಿರಣಗಳನ್ನು ಗಾಳಿಯ ಸಹಾಯದಿಂದ ಹೊತ್ತೊಯ್ಯುತ್ತಿರುವ ಮೋಡಗಳು ಒಂದೊಂದಾಗಿ ಕಳಚಿಕೊಳ್ಳುತ್ತಿರುವಾಗಲೇ ಕತ್ತಲೆಯು ಇದು ತನಗೆ ಸಿಕ್ಕ ವರದಾನವೆಂಬಂತೆ ಆವರಿಸುತ್ತಿರುವ ಹೊತ್ತಿಗೇ,  ಜಗಲಿಯ ಬಾಂಕಿನ ಮೇಲೆ ಕುಳಿತು, ಕವಳದ ಸಂಚಿಯೊಳಗೆ ಕೈ ಆಡಿಸಿ ಅಡಕೆಯೊಂದನ್ನು ತೆಗೆದು, ಅಡಕತ್ರಿಯೊಳಗೆ ಇಟ್ಟು ಚೂರು ಮಾಡಲು ಹವಣಿಸುತ್ತಿರುವಾಗ ನಡುಗುತ್ತಿರುವ ಕೈ ಗಳಿಂದಲೋ ಏನೋ;  ಅದು ಜಾರಿ, ಪುಟಿದು ಉರುಳಿ ಹೋಗಲು ಗಜಾನಣ್ಣನ ಮನಸ್ಸಿನಲ್ಲಿ ಎದ್ದಿರುವ ಧಾವಂತದಂತಿತ್ತು. ಬಾಂಕಿನ ಅಡಿಗೇ ಎಲ್ಲೋ ಉರುಳಿದ ಅಡಕೆಯನ್ನು ಆ ಕಿರುಕತ್ತಲೆಯಲ್ಲಿಯೇ ಹುಡುಕಿ, ಮತ್ತೆ ಅದನ್ನು ಬಿಡದೇ ಚೂರಾಗಿಸಿ ಸುಣ್ಣ ಹಚ್ಚಿದ ಎಲೆಯೊಳಗೆ ಮಡಚಿ ಬಾಯೊಳಗೆ ಹಾಕಿಕೊಂಡಿರುವುದು ಯಾವುದೋ ಹಠಕ್ಕೆ ಬಿದ್ದಿರುವಂತಿತ್ತು.
“ಯಂತದೇ, ಇವತ್ತು ಬಾಗ್ಲಿಗೆ ದೀಪ ಹಚ್ಚದೆಂತು ಇಲ್ಯನೇ? ನಾ ಹನಿ ಸುಬ್ರಾಯ ಭಟ್ರ ಮನೆವರ್ಗೆ ಹೋಗ್ಬತ್ನೆ,” ಎಂದೇಳುತ್ತಾ, ದೇವ್ರೊಳದ ಕಂಭಕ್ಕೆ ಆನಿಸಿ ಕುಳಿತಿರುವ ಹೆಂಡತಿಗೆ ಹೆಬ್ಬಾಗಿಲ ಎರಿಸಿಕೊಳ್ಳುವುದನ್ನು ಎಚ್ಚರಿಸಿ, ಮದ್ಯಾಹ್ನವಿಡೀ ಹುಡುಕಿದ ಏನೋ ಕಾಗದವನ್ನು ಸಂಚಿಯೊಂದಕ್ಕೆ ತುರುಕಿ, ಸಂಚಿಯನ್ನು ಬಗಲಿಗೆ ತುರುಕಿಸಿಕೊಂಡು, ಜಗಲಿಯಲಿಯ ಸ್ವಿಚ್ಚಿಗೆ ಚಾರ್ಜಿಗೆ ತೂಗುಹಾಕಿದ ಬ್ಯಾಟ್ರಿಯನ್ನೊಮ್ಮೆ ಪರೀಕ್ಷಿಸುತ್ತಾ  ಚಪ್ಪಲಿಯ ಧರಿಸಿ, ಧಾಪುಗಾಲಿಡುತ್ತಾ ಹೊರನಡೆದರು ಹೆಗಡೆಯವರು.
ಗಾಢಾಲೋಚನೆಗೆ ಮುಳುಗಿದ್ದ ಅನುಸೂಯಕ್ಕ ಗಂಡನ ಎಚ್ಚರಿಸಿದ ಮಾತಿಗೆ ದೀಪವನ್ನು ಪ್ರಧಾನ ಬಾಗಲಿಗೆ ಹಚ್ಚಿ, ನಮಸ್ಕರಿಸಿ ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತು, ಜಗಲಿಯ ಬಾಗಿಲನ್ನು ಸ್ವಲ್ಪ ಮರೆಮಾಡಿ ಸೀದಾ ಅಡುಗೆ ಮನೆಗೆ ಸಾಗಿ, ಆಳು ಆಗತಾನೆ ಕರೆದಿಟ್ಟು ಹೋದ ಹಾಲನ್ನು ಕಾಯಿಸಲು ಅಣಿಮಾಡತೊಡಗಿದಳು. ದಿನದ ರೂಢಿಯಂತೆ ಈ ಸಮಯದಲ್ಲಿ ಹಾಡಿಕೊಳ್ಳುವ ದೇವರ ಭಜನೆ ಮೌನವಾಗಿದ್ದು, ಮನಸ್ಸು ಯಾವುದೋ ಯೋಚನೆಗೆ ಸಿಲುಕಿ ಮಣಭಾರವಾಗಿರುವುದು ಸುಲಭವಾಗಿ ಗುರುತಿಸುವಂತಿತ್ತು.
ಅಷ್ಟೇ ಹೊತ್ತಿಗೇ ಎರಿಸಿಬಂದ ಹೆಬ್ಬಾಗಿಲನ್ನು ಸರಿಸಿ, ಒಳ ನಡೆದು ಬರುತ್ತಿರುವ ಹೆಜ್ಜೆಯ ಧ್ವನಿ ಕಿವಿಗೆ ಬಂದು ತಾಕಿದಂತೆ ಅದಕೇನೆ ಕಾಯುತ್ತಿರುವಂತಿದ್ದಳು ಅನುಸೂಯಕ್ಕ.
“ಪದ್ಮಕ್ಕ, ನೀ ಬಪ್ದಕ್ಕೇ ಬರವು ನೋಡ್ತಿದ್ನೇ” ಎಂದು ಬರುತ್ತಿರುವವರ ಸ್ವಾಗತವೂ ನಡೆಯಿತು.
ಗಜಾನನ ಹೆಗಡೆಯ ಮನೆಯನ್ನು ದಾಟಿ ಸೀದಾ ಸಾಗುವ, ಇಳುಕಿನ ರಸ್ತೆಯ ಕೊನೆಯಲ್ಲಿ ಬರುವುದೇ ಶಿವರಾಮ ಜೋಶಿಯ ಮನೆ. ಆರಂಭದಲ್ಲಿಯೇ ಏಳೆಂಟು ಮನೆಗಳಿರುವ ಊರು, ಹಾಗೆಯೇ ಸ್ವಲ್ಪ ಜಾಗೇ ಬಿಟ್ಟು ಮುಂದೆ ನಾಲ್ಕು ಮನೆಗಳಿಗಷ್ಟೇ ಸೀಮಿತ ಗೊಳಿಸಿದೆ. ಆ ಎಂಟು ಮನೆಗಳು ಸುಬ್ರಾಯ ಭಟ್ಟರ ಮನೆಯನ್ನೂ ಒಡಗೂಡಿ; ಒಟ್ಟಾಗಿ ಒಂದೇ ಸಾಲಿನಲ್ಲಿದ್ದರೆ, ಈ ಉಳಿದ ನಾಲ್ಕು ಮನೆಗಳೂ ಪ್ರತ್ಯೇಕವಾಗಿವೆ. ಹೀಗೆ ಮೇಲಿನ ಕೇರಿ-ಕೆಳಗಿನ ಕೇರಿಯೆಂದು ಊರು ಇಬ್ಬಾಗವಾಗಿದೆ. ಆ ಕೆಳಗಿನ ಕೇರಿಯ ಕೊನೆಯಲ್ಲಿ ಬರುವುದೇ ಇವರಿಬ್ಬರ ಮನೆಗಳು. ಇಬ್ಬರ ಮನೆಯೂ ತುಂಬಾ ದೂರವೂ, ಹತ್ತಿರವೂ ಅಲ್ಲದ ಒಂದು ಕೂಗಳತೆಯ ದೂರದಲ್ಲಿರುವುದಷ್ಟೇ.
ಪದ್ಮ ಮತ್ತು ಅನಸೂಯ ಇಬ್ಬರೂ ಒಂದೇ ಓರಗೆಯವರು ಅನ್ನುವುದಕ್ಕಿಂತ ಒಂದೇ ಸಮಯದಲ್ಲಿ ಆ ಎರಡು ಮನೆಗಳನ್ನು ಬೆಳಗಲು ಬಂದ ಸೊಸೆಯಂದಿರು. ಬಹಳ ಅಂತರದಲ್ಲೇನೂ ನಡೆದಿಲ್ಲ ಶಿವರಾಮ ಹಾಗೂ ಗಜಾನನರ ಮದುವೆಗಳು. ಶಿವರಾಮನ ಮದುವೆಗೆ ಬಂದ ಅಡುಗೆಯವರೇ ಅಲ್ಲಿಯ ಕೆಂಡ ಆರಿ ಬೂದಿಯಾಗುವ ಮೊದಲೇ ಗಜಾನನನ ಮದುವೆಯ ಅಡುಗೆಯನ್ನೂ ಮಾಡಿ, ಬಡಿಸಿ ಹೋಗಿದ್ದರು. ಹಾಗೇ ಆ ಮನೆಗಳಿಗೆ ಹೊಸಬರಾದ ಅವರಿಬ್ಬರೂ ಹೊಂದಿಕೊಳ್ಳಲು ಒಬ್ಬರನ್ನೊಬ್ಬರಿಗೆ ಆಸರೆಯಾಗಿ ದಿನ ಕಳೆದು ಈಗ ಊರಿಗೇ ಅಕ್ಕಂದಿರಾಗಿದ್ದಾರೆ. ಪದ್ಮಕ್ಕ ಅನುಸೂಯಕ್ಕನಿಗಿಂತ ಮೂರು ವರ್ಷವಶ್ಟೇ ಹಿರಿಯಳು. ಅಲ್ಲದೇ ಸೌಮ್ಯ ಗುಬ್ಬಚ್ಚಿಯ ಸ್ವಭಾವದ, ಸ್ವಲ್ಪವೇ ನರಗುತನದ ಅನುಸೂಯಕ್ಕಳಿಗೆ ಆವಳ ಆಸರೆಯು ಒಂದಷ್ಟು ಹೆಚ್ಚೇ ಅವಶ್ಯಕವಾಗಿ ಪರಿಣಮಿಸಿತ್ತು. ಮೊದ ಮೊದಲಿನ ದಿನಗಳಲ್ಲಿ ಸಾಯಂಕಾಲದ ವಾಯು ವಿಹಾರಕ್ಕಾಗಿ ತೆರಳುತ್ತಿದ್ದ ಅವರು, ಈಗ ಕೆಲಸದ ಒತ್ತಡದಿಂದ ಅದನ್ನು ನಿಲ್ಲಿಸಿದ್ದಾರೆ. ಆದರೆ ಈಗ ಶಿವರಾಮ ಜೋಶಿಯ ಮನೆಯ ಆಕಳು ಗಬ್ಬವಿರುವುದರ ಕಾರಣ, ಹಾಲಿಗಾಗಿ ಪದ್ಮಕ್ಕ ಅನುಸೂಯಕ್ಕನ ಮನೆಗೆ ಸಂಜೆ ಬರುವುದನ್ನು ಇಬ್ಬರ ಕುಶಲೋಪರಿಯ ಮಾತುಕತೆಯ ಭೇಟಿಗೆ ಕಾರಣವಾಗಿರಿಸಿಕೊಂಡಿದ್ದರು.
“ಇವತ್ತು ಸ್ವಲ್ಪ ತಡ ಆತಕ್ಕೇ. ನಾಳೆ ನೆಂಟ್ರು ಬಪ್ಪವಿದ್ವ ಇಲ್ಯ, ಅದ್ಕೆಯಾ ಹಲಸಿನ ಹುಳಿ ಮಾಡನ ಹೇಳಿ, ನಮ್ಮನೆವ್ರತ್ರ ಇವತ್ ಬೆಳಗ್ಗೆ ತೋಟ್ದ ಅಂಚಿಗಿಪ್ಪ ಮರದ್ದ ಹಲಸಿನ ಕಾಯ, ಸ್ವಲ್ಪ ಎಳೆದೇ ನೋಡಿ ಕೊಯ್ಕಂಡ್ ಬನ್ನಿ ಅಂದಿ. ಎಳೆ ಕಾಯಿ ಹನಿ ಮೇಲೆ ಇತ್ತಡ. ಮೇಲತ್ತಿ ಅದ್ರ ಕೊಯ್ಯ ಬರ್ದಲ್ಲಿ ಕಾಲುಳುಸ್ಕ್ಯ ಬಂಜ್ರು. ನೋವು ನೋವು ಹೇಳಿ ಒದ್ದಾಡದ್ನ ನೋಡಲಾಗ್ದೇ ಅದ್ಕನಿ ಬಿಸಿ ಎಣ್ಣೆ ಹಚ್ಚಿಕ್ಕೆ, ತಿಕ್ಕಿಕ್ಕೆ ಬಂದಿ,” ಎಂದು ಬರು ಬರುತ್ತಲೇ ಮಾತಿಗೆ ಶುರುಹಚ್ಚಿಕೊಂಡಳು ಪದ್ಮಕ್ಕ.
“ಅಯ್ಯೋ, ಮಳ್ಳೇಯಲೆ! ಅಲ್ದೇ, ಅಂವ್ಯಾರೋ ಉಳುಕು ತೆಂಗ್ಯವ್ನೇ ಬಾಬು ಹೇಳಿ, ಮೇಲಿನ ಕೇರಿಗೆ ಕೆಲ್ಸಕ್ಕೆ ಬತ್ನಡಲೆ, ಅವಂಗಾರು ಹೇಳಿ ಕಳ್ಸದಲ್ದ? ಚಲೋ ಉಳ್ಕು ತೆಗಿತ್ನಡಲೇ ಅಂವ. ಅದೇ ಸುಬ್ರಾಯ ಭಟ್ರ ಇದ್ರಲೆ ಅವ್ರ ಕೊನೆ ತಮ್ಮ ಗಪ್ಪತಿ; ಬಿಸ್ಲಕೊಪ್ಪಕ್ಕೆ ಕಾರ್ಯ ಸಾಗ್ಸಲೆ ಹೋದಾಗ, ಉಂಡು ಮನಕ್ಯ ಇಪ್ಪಕಿದ್ರೆ, ಕಾರ್ಯಕ್ಕೆ ಬಂದ ಶಣ್ ಹುಡ್ರು ಅಂವ ಮಲಗಿದ್ದ ದಿಂಬಿಗೋ ಒಂದೇ ಸಲಕ್ಕೆ ಎಳದು, ಕುತ್ಗೆ ಕಳಕ್ ಗುಟ್ಟೋಗಿತ್ತಡ. ಉಳುಕಿದ್ ಹೊಡ್ತಕ್ಕೆ ಕುತ್ಗೆ ವಾರೇ ಆಗೋಗಿ ಇಷ್ಟ್ ಉಬ್ರಕೆ ಬಾತಿ, ತಲೆ ಎತ್ತಲಾಗ್ದೇ ನೋವಿಗೆ ಲಬೋ ಲಬೋ ಹೊಯ್ಕ್ಯತಿದ್ನಡ. ಅವಗ ಈ ಬಾಬುನೇ ‘ಭಟ್ರೆ, ಅದೇ ಆ ಮರದ ತುದಿಗೆ ಹುಲಿ ಕುಂತದ ನೋಡ್ರ!’ ಹೇಳಕ್ಯೋತ ಉಳಕಿದ್ ಕುತ್ಗೆನ ಜಾರಸಿ ಸರಿ ಮಾಡಿ, ಹನಿಯ ಅದೆಂತೋ ಎಣ್ಣೇತಂದು ಬಾತಿದ್ ಜಾಗಕ್ಕೆ ಸವರಿದ್ನಡ. ಎರಡೇ ದಿನಕ್ಕೇ ನಮ್ಮನೆ ಶ್ರಾದ್ಧಕ್ಕೆ ಅವನೇ ಸಾಗ್ಸಲೆ ಬಂದಿದ್ನಲೆ!” ಎನ್ನುತ್ತಾ ಕೈ ಸನ್ನೆಯನ್ನೆಲ್ಲಾ ಮಾಡಿ, ದೊಡ್ಡಕಣ್ಣು ಮಾಡಿ ಆಶ್ಚರ್ಯ ಸೂಚಿಸಿ, ದೀರ್ಘವಾಗಿ ಮಾತನಾಡಿದ್ದರಿಂದ ಒಮ್ಮೆಲೆ ಬಿಟ್ಟ ಉಸಿರನ್ನು ಮತ್ತೆ ಎಳೆದುಕೊಂಡು “ನಮ್ಮನೆವ್ರು ಸುಬ್ರಾಯ ಭಟ್ರ ಮನಿಗೆ ಹೋಜ್ರು, ಬೇಕಿದ್ರೆ ಅವ್ರ ಮೊಬೈಲ್ಗೊಂದು ಪೋನ್ ಮಾಡಿ ಹೇಳದ್ರೆ, ಅಲ್ಲೇ ಅವಂಗೆ ಸುದ್ದಿ ತಿಳಸಿ, ಕರ್ಕಂಡೂ ಬಪ್ಪಲೆ ಹೇಳಲಾಗ್ತನ?” ಎಂದು ಪ್ರಶ್ನಾರ್ಥಕವಾಗಿ ಪದ್ಮಕ್ಕನನ್ನು ನೋಡಿದಳು ಅನುಸೂಯಕ್ಕ.
“ಇಲ್ಯೆ, ಬ್ಯಾಡ. ಅಶ್ಟೆಲ್ಲಾ ಸೀರಿಯಸ್ ಎಂತು ಆಜಿಲ್ಯೆ, ನಾಳೆ ಇಷ್ಟತಿಗೆ ಕಡಮೆ ಅಗಿರ್ತೆ ಅವ್ರಿಗೆ, ನಮ್ಮನೆವ್ಕೇನು ಹೊಸ್ತಲ್ಲ ಇದು ಬಿಡು. ರಾಶಿ ವಾಗಾತಿ ಮಾಡತ ಹೇಳಾದ್ರೆ ಆರಾಮ ಮಲಗ್ಬಿಡ್ತ ಮತೆ ಇವು! ಸಾಕು ಮಾರಾಯ್ತಿ ಸುಮ್ನಿರು” ಎನ್ನುತ್ತ ನಕ್ಕಳು. “ಅದಿರ್ಲೆ ಅನಸೂಯ, ನಿನ್ನೆ ಸಂಜೆ ನಮ್ಮನೆವ್ರ ಸಂತಿಗೆ ಪ್ಯಾಟಿಂದ ಬಸ್ಸಿಗೆ ಗಜಾನಣ್ಣನೂ ಬನ್ಯಡ. ಮಾತಾಡ್ಸಿದ್ರೂ ಸರಿ ಮಾತಾಡಿದ್ನಿಲ್ಯಡ. ಎಂತೋ ರಾಶಿ ಚಿಂತೆಲ್ಲಿ ಇದ್ದಂಗೆ ಕಾಣತಿದ್ನಡ. ನನ್ ನಿನ್ ದೋಸ್ತಿ ಗೊತ್ತಿಪ್ಪ ಅವು ನಿನ್ನೆ ರಾತ್ರಿ ಊಟಕ್ಕುಂತಾಗ ನನ್ನತ್ರ ಕೇಳದ್ರು. ನಾಕ್ ದಿನದಿಂದ ನೀನು ಮತೆ ಸೋತೋದವ್ರಂಗೆ ಮಕ ಹಾಕ್ಯಂಡು ಇದ್ದೆ. ಎಂತದು ಹಂಗಿದ್ರೆ ನಿಂಗಳ ಕಥೆ?” ಎಂದು ಸಣ್ಣ ಧನಿಯಲ್ಲಿ ಪದ್ಮಕ್ಕನೇ ಕೇಳಿದಳು.
ಅನಸೂಯಕ್ಕ ಒಂದುಸಲ ಈಗ ಗೊಂದಲಕ್ಕೀಡಾಗಿದ್ದೆಂತು ಹೌದು. ಕಾಡುತ್ತಿರುವ ಸಮಸ್ಯೆಯನ್ನು, ಸ್ನೇಹಿತೆಯ ಜೊತೆ ಅದು ಇದು ಕಥೆಹೇಳಿ ಸ್ವಲ್ಪ ಹೊತ್ತಾದರೂ ಮರೆವಿನತ್ತ ಕಳುಹಿಸಿ ಸಮಾಧಾನ ತೆಗೆದುಕೊಳ್ಳುವ ಹೊತ್ತಿಗೇ ಪದ್ಮಕ್ಕನಿಂದ ಬಂದ ಈ ಪ್ರಶ್ನೆ ಅವಳನ್ನು ಮೌನವಾಗಿಸಿತಾದರೂ, ಇವಳೆಷ್ಟಂದರೂ ನನ್ನ ಸ್ನೇಹಿತೆ, ಕುಟುಂಬದ ವಿಷಯ ಮನೆಯ ನಾಲ್ಕು ಗೋಡೆಗಳನ್ನು ಮೀರಿ ಸಾಗಬಾರದೆಂದಿದ್ದರೂ, ಮನಸ್ಸಿನಲ್ಲೇ ಇದ್ದುಕೊಂಡು ನೋಯಿಸುವ ವಿಷಯವನ್ನು ಇವಳೆದುರು ಹೇಳಿಕೊಂಡರೆ ಕಳೆದುಕೊಳ್ಳುವುದೇನಿಲ್ಲವೆಂದು ತನ್ನಲ್ಲಿಯೇ ಯೋಚಿಸಿ, ನಿಟ್ಟುಸಿರನ್ನೊಮ್ಮೆ ಹೊರಚೆಲ್ಲಿ, ಹೇಳತೊಡಗಿದಳು.
“ಪದ್ಮಕ್ಕ, ಈ ವಿಷ್ಯ ಎಂತಾ ಹೇಳವು, ಹೆಂಗೆ ಹೇಳವು ತೆಳಿತಿಲ್ಯೆ. ಈ ಮಕ್ಕ ಹುಟ್ಟದು ಹುಡ್ತ. ಮತ್ತೆಂತಕ್ಕಾದ್ರೂ ದೊಡ್ಡವಾಗ್ತ್ವನ. ನಮ್ ಪ್ರಾಣ ತಿಂಬ್ಲೆಯನ ಹೇಳಿ! ನಮ್ಮನೆ ಕೂಸಿದ್ದಲೆ ಅದ್ಯಾರೋ ಮಾಣೀನ ಲವ್ ಮಾಡಿದ್ದಡ. ಅವ್ನೇ ಮದ್ವೆ ಆಗ್ತಿ ಹೇಳ್ಕ್ಯೋತ ಕುಂತಿದ್ದು ಹೇಳಿ. ನಮ್ಮನೆವ್ರ ಹಠನೂ ನಿಂಗೆ ಗೊತ್ತಿದ್ದಲೆ, ಬ್ಯಾಡಲೇ ಬ್ಯಾಡ ಹೇಳಿ ಇವ್ರದ್ದು. ಇದೇ ಜಗ್ಳಾಟನೇ ಮಾರಾಯ್ತಿ. ಒಂದ್ವಾರ ಕಳದೋತೆ. ನಮ್ಮನೆವ್ರಂತು ಈಗ ಎರಡ್ದಿನ ಆತೆ, ಸರಿ ಊಟನು ಮಾಡ್ತ ಇಲ್ಲೆ. ಮನೆ ಜನನೇ ಹಿಂಗೆ ಕಿತ್ತಾಟ ಮಾಡತಿದ್ರೆ ನಂಗಾದ್ರೂ ಹೆಂಗೆ ಮನ್ಸ್ ತಡಿತೆ? ಇದ್ನೆಲ್ಲ ನಾ ಇಷ್ಟೆಲ್ಲಾ ದಿನ ತಡಕಂಡಿದ್ದೇ ಹೆಚ್ಚಾತು,” ಎಂದು ಗದ್ಗದ ಕಂಠದಲ್ಲೇ ಎನ್ನುತ್ತ ಕಣ್ಣು ಚಿಕ್ಕದಾಗಿ ಅಸರಿದ ನೀರನ್ನು ಸೀರೆಯ ಸೆರಗಿಂದ ಒರೆಸಿಕೊಂಡಳು ಅನಸೂಯಕ್ಕ.
“ಇಷ್ಯೋ, ಮಕ್ಕ ಇದ್ಮೇಲೆ ಅವ್ರ ಗೋಳು ಇಪ್ದೇ ಅಲ್ದನೇ ಅನ್ಸೂಯ? ಗೋಳು ಕೊಡದೇ ಇಪ್ಪ ಮಕ್ಕ ಆದ್ರೂ ಯಾರಿದ್ವೆ ಈಗ? ಅಲ್ದೇ ಆ ಮಾಣಿನೇ ಮಾಡಕ್ಯಂಡ್ರಾತಪ. ಈಗಿನ ಕಾಲ್ದಲ್ಲಿ ಇದೆಲ್ಲಾ ನಡಿತಲೆ.” ಎಂದು ಸ್ವಲ್ಪ ಸಮಾಧಾನ ಮಾಡಲು ಯತ್ನಿಸಿದಳು ಪದ್ಮಕ್ಕ.
“ಪದ್ಮಕ್ಕ ನೀನೂ ಹಂಗೇ ಅಂಬ್ಯನೆ? ಇಷ್ಟು ವರ್ಷ ಅವ್ರನ್ನ ಸಾಕಿ, ಬೆಳೆಸಿದ್ದಕ್ಕೆ, ಅವು ಹೇಳ್-ಹೇಳಿದ್ದನ್ನೆಲ್ಲಾ ಮಾಡಾಕಿದ್ದಕ್ಕೆ ಮಕ್ಕ ನಮ್ಮೇಲೆ ಇಷ್ಟೂ ಗೌರವ ಕೊಡದೇ ಹೋದ್ರೆ ಹೆಂಗೆ? ಅವ್ರನ್ನ ಭೂಮಿಮೇಲೆ ತಂದಿದ್ದಕ್ಕಾದ್ರೂ ನಂಗ ಹೇಳಿದ್ ಕೇಳಿ ಋಣ ತೀರ್ಸದ್ ಬ್ಯಾಡದ? ನಂಗವೆಲ್ಲಾ ನಂಗಳ ಅಪ್ಪ ಅಮ್ಮಂಗೆ ಒಂದಾದ್ರೂ ತಿರುಗು ಹೇಳತಿದ್ವ? ಅವು ತೋರ್ಸಿದ್ ಗಂಡಿಗೆ ಕುತ್ಗೆ ಕೊಟ್ಟು, ಕಷ್ಟವೋ ನಷ್ಟವೋ ಹೊಂದಕ್ಯಂಡು ಬಾಳ್ವೆ ನಡಸ್ತ್ವಿಲ್ಯ? ನಂಗಳಂಗೇ ಇವ್ಕು ಅಪ್ಪನ್ ಮಾತು ಕೇಳದ್ರೆ ಎಂತಾ ಆಗ್ತು ನೋಡನ? ಹೇಳಿ ಕೂಸನತ್ರೂ ಹೇಳದ್ರೆ, ಆಯಿ ನಿಂಗೆಂತೂ ತೆಳಿತಿಲ್ಲೆ ಸುಮ್ನಿರು ಹೇಳಿ ನನ್ನೇ ಸುಮ್ನಾಗಿಸ್ತಲೆ! ಹಿಂಗಲ್ಲ ಹೇಳದ್ರೆ ಬೇಜಾರಾಗ್ತಿಲ್ಯ ಎಂತವ?” ಎಂದು ಮತ್ತೆ ಗೋಳಾಡಿಕೊಂಡಳು ಅನಸೂಯಕ್ಕ.
ಈಗ ಪದ್ಮಕ್ಕ ಸೂಕ್ಷ್ಮ ಮನಸ್ಸಿನ ಇವಳಲ್ಲಿ ತಾನು ಏನ ಹೇಳ ಹೊರಟರೂ ತಪ್ಪಾಗಬಹುದೆಂದು, ‘ಹೂಂ’ ಅಷ್ಟೇ ಗುಟ್ಟಿದಳು.
ಅನಸೂಯಕ್ಕನೇ ಮತ್ತೆ, “ನಂಗಕಿಗೆಂತೂ ಚೂರು ಚಲೋ ಇಲ್ಲೆ ನೋಡು, ಈ ಲವ್ವು ಪವ್ವಿನ ಮ್ಯಾಲೆಲ್ಲವ. ತೆಂಗಿನ ಮನೆ ಬಾವಯ್ಯನ ಕಥೆ ನಿಂಗೆಂತಾ ಗೊತ್ತಿಲ್ದೇ ಇಪ್ಪದನೇ? ಲವ್ವು ಲವ್ವು ಹೇಳಿ ಕುಣದ್ದ ಅವ್ರಮನೆ ಕೂಸು, ಅವ್ನೇ ಆಗ್ತಿ ಹೇಳಿ ಹಠಮಾಡಿ ಮದ್ವೆನೂ ಆಕ್ಯಂಡ್ತು. ಕಡಿಗೆ ನಾಕೇ ನಾಕ್ ದಿನಕ್ಕೆ ಬಾಳ್ವೆ ಮಾಡಲೆ ಸಾಧ್ಯವೇ ಇಲ್ಲೆ ಹೇಳಿ ಅಪ್ಪನ ಮನಿಗೆ ಬಂದು ಕುತ್ಗಂಡ್ತು. ಪಾಪ, ಆ ಬಾವಯ್ಯನ ಮರ್ಯಾದೆ ಮೂರು ಕಾಸಿಗೆ ಹರಾಜ ಆದಂಗೆ ಆಜಿಲ್ಯ?  ಆ ಕೂಸ್ನ ಆದ್ರು ನೋಡು ಈಗ, ಹೆಂಗೆ ಮೈ ತುಂಬಕ್ಯಂಡು ಇದ್ದಿದ್ದು ಓಣಕಲ ಓತಿಕ್ಯಾಟ ಆಗೋಜು ಹೇಳಿ. ಇದನ್ನೇಲ್ಲಾ ಕಣ್ಣಾರೇ ಕಂಡ, ಅನುಭವಿಸಿದ್ನ ಕೇಳಿ ಗೊತ್ತಿಪ್ಪವು ಯಾರಿಗಾದ್ರೂ ಮನ್ಸ್ ಬತ್ತ ಎಂತವ?” ತನ್ನ ಗೋಳಿಗೆ ತಾನೇ ಸಮಾಧಾನ ಮಾಡಿಕೊಂಡು, “ಅವು ಕೂಸಿನ ಜಾತ್ಗ ಭಟ್ರಿಗನಿ ತೋರಸ್ಕ್ಯಂಡು ಬಪ್ಲೆ ತಗಂಡೋಜ್ರು ಕಾಣುತು. ಮದ್ಯಾನಿಡೀ ಮೆತ್ತಿಮೇಲೆ ಕಾಗ್ದಪತ್ರರಾಶಿಲೀ ಎಂತೋ ಹುಡುಕ್ಯೋತ ಇದ್ದಿದ್ರಪ. ಎಂತದ್ರೀ ಕೇಳದ್ರೆ ಹೂಂ ಹಾಂ ಗುಟ್ಟಿದ್ರಿಲ್ಲೆ. ಕಡಿಗೆ ಶಿಕ್ಕಿದ್ದು ಕಾಣತು. ನೋಡವು ಎಂತಾ ಮಾಡ್ತ್ರು ಮುಂದೆ ಹೇಳಿ. ಎಲ್ಲಾ ಹಣೆಬರಹದಲ್ಲಿ ಇದ್ದಂಗೆ ಆಗ್ತು ತಗ!” ಎನ್ನುತ್ತಾ ತನ್ನ ಮಾತಿಗೆ ಪೂರ್ಣವಿರಾಮವನ್ನಿತ್ತು, ಹೋಗಿ ಪದ್ಮಕ್ಕನಿಗೆ ಕೊಡುವ ಹಾಲನ್ನು ಎರಸಿ, ತಂದಿಟ್ಟಳು.
“ಅನಸೂಯಾ, ಅವ್ರ ಇವ್ರ ಮನೆ ಸುದ್ದಿನ ಚಿಂತೆಮಾಡ್ತಾ ತಮ್ಮನೆ ಮೇಲೆ ಯಾರಾದ್ರೂ ಚಪ್ಪಡಿಕಲ್ಲು ಎಳ್ಕಂಡ್ರೆ ಅವ್ಕೆ ಮಳ್ಳು ಹೇಳದ್ದೇ ಇನ್ನೆಂತಾ ಹೇಳಲಾಗ್ತೇ? ಗಜಾನಣ್ಣಂಗೆಂತು ಹಠಮಾರಿತನ ಹೇಳಾತು. ಇನ್ನು ನಿನ್ ಬುದ್ದಿ ಎಲ್ಲಿದ್ದೆ? ನಾಳೆ ನಿಮ್ಮನೇ ಕೂಸೇ ನಿಂಗ ಬ್ಯಾಡ ಹೇಳಿದ್ದಿ ಹೇಳಿ ಎಂತಾರು ಹೆಚ್ಚುಕಮ್ಮಿ ಮಾಡ್ಕ್ಯಂಡ್ರೆ ಅಥವಾ ನಿಂಗಕೆ ವಿರುದ್ಧವಾಗಿ ನಡ್ಕಂಡ್ರೆ ಮತ್ತೆ ಮರ್ಯಾದಿ ಹೋಪದು ಯಾರದ್ದಡ? ಮನೆಲಿಪ್ದು ಒಂದೇ ಮಗಳಪ ಇಷ್ಟವೋ ಕಷ್ಟವೋ ಎಂತು ಹೇಳಿ ಮಾಡಿ ಮುಗಸದು ಚಲೋ ಅಲ್ದಾ? ಅಲ್ದೇ, ಮಾಣಿ ನೋಡಿದ್ಯ ನೀನು? ಇಲ್ಲೆ ಅಲ್ದ? ಹಂಗೆ ನಿಂಗಕೆ ನಿಂಗನೇ ನಿರ್ಧಾರ ತಗಂಬದು ಎಷ್ಟು ಸರಿ ಹಂಗಿದ್ರೆ? ಯಾವ್ದಕ್ಕೂ ವಿಚಾರ ಮಾಡ್ಸು.”  
ಎಂದು ಪದ್ಮಕ್ಕ ಸಮಾಧಾನ ಮಾಡುತ್ತಿರುವ ಹೊತ್ತಿಗೇ ಜಗುಲಿಯ ಹೆಬ್ಬಾಗಿಲನ್ನು ಸರಿಸಿದ ಧ್ವನಿ ಕೇಳಿಬಂದಿತು,
“ಗಜಾನಣ್ಣನೂ ಬಂದಂಗೆ ಕಾಣ್ತೆ. ಎಲ್ಲಾ ಒಳ್ಳೇದಾಗ್ತು ತಗ. ನಿಂಗವೇನು ಯಾರಿಗೂ ಕೇಡ್ನ ಬಯ್ಸದವಲ್ಲ. ನಾಳೆ ನಾ ಹಾಲ್ನ ತಗಂಡೋಪ್ಲೆ ಬಪ್ದು ಡೌಟೇಯಕ್ಕೆ. ಅದೇ ಹೇಳಿದ್ನಲೆ ನೆಂಟ್ರು ಬತ್ತ ಹೇಳಿ. ಎಂತಾಗ್ತನ. ಅದ್ಕೆಯಾ ನಾ ಬಪ್ಲಾಗ್ತಿಲ್ಯನ. ನೀ ಗೋಳಾಡ್ಕ್ಯೋತ ಇರಡ. ಸುಧಾರಷ್ಕ್ಯ. ಆತಾ?” ಎಂದೇಳಿ ಲಗುಬಗೆಯಿಂದ ಹಾಲಿನ ಪಾತ್ರೆ ತೆಗೆದುಕೊಂಡು ಹೊರನಡೆದಳು ಪದ್ಮಕ್ಕ.
ಅವಳು ಹೊರನಡೆಯಲಾಗಿ; ಅವಳು ಮಾತನಾಡಿಸಿದ, ತಿರುಗಿ ಬಂದ ತನ್ನ ಗಂಡನ ಧ್ವನಿ ಕಿವಿಗೆ ಬಿದ್ದಾಗ, ಗಂಡ ಬಂದಿದ್ದನ್ನು ಖಾತ್ರಿ ಮಾಡಿಕೊಂಡವಳಾಗಿ ಐದು ನಿಮಿಷ ಬಿಟ್ಟು ಇವಳೂ ಹೊರ ಜಗುಲಿಗೆ ಬಂದಳು ಅನುಸೂಯಕ್ಕ.
ಇವಳು ಹೊರ ಬರುವ ಹೊತ್ತಿಗೇ, ಗಜಾನಣ್ಣ ಯಾರ ಹತ್ತಿರವೋ; ಫೋನಿನಲ್ಲಿ ನಾಳೆ ನಾವು ಬರುತ್ತಿರುವುದಾಗಿಯೂ, ಮತ್ತೆ ಯಾರಿಗೋ ಫೋನ್ ಮಾಡಿ, “ನಾಳೆ ಹನಿ ಅವ್ರ ಮನೆವರಿಗೆ ಹೋಗ್ಬಪ್ಪನ!” ಎಂದು ಹೇಳುತ್ತಿದ್ದ.
“ಅನ್ಸೂಯ, ನಾಳೆ ಹನಿ ಲಗುನೆ ಎದಕಂಡು ತಯಾರಗೇ. ಮಾಣಿ ಮನೆವರಿಗೆ ಹೋಗ್ಬಪ್ಪನೆ. ಊರ್ತೋಟದ್ದ ರಾಮಚಂದ್ರಂಗೆ ಕಾರ್ ತಪ್ಲೆ ಹೇಳಿದ್ದಿ. ಬತ್ನಡ ಅವ್ನುವ. ಈಗ ಊಟಕ್ಕಾಜ ಎಂತು?À” ಎಂದಷ್ಟೇ ಹೇಳಿ, ಬಚ್ಚಲಮನೆಯ ಕಡೆ ನಡೆದು, ಬಾಯಿಯಲ್ಲಿ ಅಳಿದುಳಿದ ಅಡಕೆ ಚೂರನ್ನು ಉಗುಳಿ, ಕೈ-ಕಾಲು ತೊಳೆದು ದೇವರ ಒಳಕ್ಕೆ ನಡೆದು, ಭಸ್ಮ ಹಚ್ಚಿ, ಮಣೆ ಹಾಕಿ ಕುಳಿತು ಕೊಂಡನು.
ಅವರ ಮಾತನ್ನು ಕೇಳಿ ತಬ್ಬಿಬ್ಬಾದಳೊಮ್ಮೆ ಅನಸೂಯಕ್ಕ. ‘ಅಲ್ಲ, ಯಾವ್ ಮಾಣಿ ಮನಿಗೆ ಹೋಪ ಸುದ್ದಿ ಹೇಳದ್ರು ಅವು. ಎಂತದನ, ಎಲ್ಲಾ ಅರ್ದಂಬರ್ದನೆಯಾ. ಒಂದು ಸರಿ ಹೇಳತ್ರಿಲ್ಲೆ.’ ಅಂದುಕೊಳ್ಳುತ್ತ, ಸೆರಗೊಮ್ಮೆ ಕುಡುಗಿ ಮತ್ತೆ ಒಳ ನಡೆದು ಊಟಕ್ಕೆ ಅಣಿಮಾಡತೊಡಗಿದಳು.
“ಹೋಯ್ ಕೇಳಚಾ, ಊಟಕ್ ಬನ್ನಿ ಹೇಳಿ” ಎನ್ನುವ ಅನುಸೂಯಕ್ಕನ ಕೂಗಿಗೆ ಗಜಾನಣ್ಣ ಎದ್ದು, ಮತ್ತೆ ದೇವರಿಗೆ ಸಾಷ್ಟಾಂಗ ನಮಸ್ಕರಿಸಿ ಒಳ ಹೋಗಿ ಊಟಕ್ಕೆ ಕುಳಿತ.
ಊಟ ಪ್ರಾರಂಭಿಸಿದಂತೆ ಹೆಂಡತಿ ಗಂಡನ ಬಳಿ ಕೇಳಿದಳು, “ಅಲ್ರೀ, ಇದ್ದಂಗೇ ಮಾಣಿ ಮನಿಗೆ ಹೋಪನ ಅಂದ್ರೆ ಎಂತು? ಯಾವ್ ಮಾಣಿ ಮನಿಗೆ? ಭಟ್ರಿಗೆ ಜಾತ್ಗ ತೋರ್ಸಲೆ ತಗಂಡ್ ಹೋಗಿದ್ರಕ್ಕು! ಎಂತಾ ಅಂದ್ರನ ಅವ್ರು?”
“ಯೆಂತೆ ನಿಂದು? ಎಲ್ಲಾ ಗೊತ್ತಾಗ್ತು ತಗ ನಿಂಗೆ ನಾಳೆಯ. ಭಟ್ರು ಗೋಡೆ ಮೇಲೆ ದೀಪ ಇಟ್ಟಂಗೆ ಮಾತಾಡದು ನಿಂಗೊತ್ತಿಲ್ಯಾ? ಆದ್ರೂ ಒಂದು ಸಮಾಧಾನಕ್ಕೆ ಜಾತಕ ತೋರ್ಸದಪ. ನಾಳೆ ಮಾತ್ರ ಹೋಪಲ್ಲಿ ನೀ ಹುಷಾರಿಂದ ಇರು ಸಾಕು. ಅವು ಹೇಳಿದ್ದಕ್ಕೆ, ಕೇಳಿದ್ದಕ್ಕೆ ಗೋಣಾಡ್ಸಡ ಮತೆ. ಮಾತು ಕಥೆ ನಂಗ ಆಡ್ಕತ್ಯ. ಕಡೆಗಂಗೇಯ ಕೂಸಿಗೆ ನಾಡಿದ್ದು ಆಪೀಸಿಗೆ ರಜೆ ಹಾಕಿಕ್ಕೆ ಮನಿಗೆ ಬಪ್ಲೆ ಹೇಳತಿ. ಅವ್ಳಿಗೂ ಖಡಕ್ಕಾಗಿ ಇನ್ಮೇಲೆ ಇದೆಲ್ಲಾ ಸಾಕು ಹೇಳದೇ ಮತೆ. ಹೂಂ. ಅನ್ನ ಸಾಕು. ಮಜ್ಗೆ ಬಡ್ಸು.” ಎಂದೇಳಿ ಲಗುಬೆಗೆನೆ ಊಟ ಮುಗಿಸಿ, ಹೊರ ನಡೆದು ಮತ್ತೆ ಕವಳ ಹಾಕಿ ಅಲ್ಲಿಯೇ ಇದ್ದ ಇಂದಿನ ಪೇಪರ್ ಹಿಡಿದು ಕುಳಿತ ಗಜಾನಣ್ಣ.
ಅನಸೂಯಕ್ಕ ಇರುವ ಗೊಂದಲದಲ್ಲಿಯೇ ತಾನೂ ಊಟಮಾಡಿ, ನಂತರದ ಕೆಲಸವನ್ನೆಲ್ಲಾ ಮುಗಿಸಿ, ಹಾಸಿಗೆ ಹಾಸಿ ಮಲಗಿಕೊಂಡು, ‘ಪದ್ಮಕ್ಕ ಹೇಳಿದ್ರಲ್ಲೂ ಖರೇ ಇದ್ದು ಅನಸ್ತಿದ್ದಪ. ನನ್ ಮಗ್ಳನ್ನೂ ನಂಬಲೆ ಸಾಧ್ಯ ಇಲ್ಲೆ. ಅಪ್ಪಂಗೆ ತಕ್ಕ ಮಗಳೇಯ. ನಾಳೆ ಎಂತಾರು ಹೆಚ್ಚು ಕಮ್ಮಿ ಮಾಡ್ಕ್ಯಂಡ್ರೆ ಕೇಳವ್ಯಾರಡ? ಅನುಭವ್ಸವೂ ನಂಗನೇ ಅಲ್ದಾ?’ ಎಂದು ಯೋಚಿಸುತ್ತಿರುವಾಗಲೆ ಕಣ್ಣು ನಿದ್ದೆಯ ಮಂಪರಿಗೆ ಸಿಕ್ಕಿ, ಮುಚ್ಚಿಕೊಂಡಿತು.
*********
“ಬಾವಯ್ಯ, ಅತ್ಗೆ, ಹೋಯ್ ಮಾತಾಡ್ಸಿದೆ”
ಬಿಸಿಲು ಏರುವ ಹೊತ್ತಿಗೇನೆಯೇ ಮನೆಗೆ ಬಂದವರನ್ನು ಮಾತನಾಡಿಸಿದ ಯಜಮಾನರು, ಜಗುಲಿಯಲ್ಲಿ ಹಾಸಿದ ಕಂಬಳಿಯಮೇಲೆ ಕುಳಿತುಕೊಳ್ಳುವಂತೆ ಸ್ವಾಗತಿಸಿದರು.
“ಮಾತಾಡ್ಸಿದ್ದೆ” ಎಂದೇಳುತ್ತಾ ಕಾಲುತೊಳೆದುಕೊಳ್ಳಲು ನೀರಿಟ್ಟ ಮನೆಯೊಡತಿ, ನಮಸ್ಕರಿಸಿ ಒಳನಡೆದಳು. ಅವಳೊಟ್ಟಿಗೆ ಅನಸೂಯಕ್ಕನೂ ಒಳಸೇರಿದಳು.
ಜಗುಲಿಯನ್ನೆಲ್ಲಾ ಕೂಲಂಕುಷವಾಗಿ ಗಮನಿಸುತ್ತಿರುವ ಗಜಾನಣ್ಣನಲ್ಲಿ ಕಾಲುತೊಳೆದುಕೊಳ್ಳುವಂತೆಯೂ ಹೇಳಿ, ಕುಡಿಯಲು ಏನು ಬೇಕು, ಎಂದೆಲ್ಲಾ ಉಪಚರಿಸುತ್ತಾ ಅದು, ಇದು ಮಾತನಾಡಿಸತೊಡಗಿದರು ಯಜಮಾನರು.
ಎಲ್ಲದಕ್ಕೂ ಚುಟುಕಾಗಿ ನ್ಹಾಂ, ನ್ಹೂಂ ಎಂದೆಲ್ಲಾ ಉತ್ತರಿಸುತ್ತಿರುವ ಗಜಾನಣ್ಣನ ಮುಖದಲ್ಲಿ ಏನೋ ತಿರಸ್ಕಾರದÀ ಭಾವ ಎದ್ದು ಕಾಣುತ್ತಿದ್ದರೂ ಸಹ, ಯಜಮಾನರು ಅದನ್ನು ಗಮನಿಸಿದರೂ ಗಮನಿಸದಂತೆ ಉಪಚರಿಸುತ್ತಿದ್ದರು.  
ಇದನ್ನೆಲ್ಲ ಸುಮ್ಮನೇ ಕುಳಿತು ನೋಡುತಿದ್ದ ರಾಮಚಂದ್ರನಿಗೆ ಮನಸಿನಲ್ಲಿ ಏನೋ ಒಂದುರೀತಿಯ ಕಸಿವಿಸಿ ಉಂಟಾಗುತಿತ್ತು. ಇಲ್ಲಿಗೆ ಬರುವ ಮೊದಲೇ, ಎಲ್ಲಾ ನಿರ್ಧರಿಸಿಕೊಂಡು ಬಂದಂತಿದ್ದ ಗಜಾನಣ್ಣನಿಗೆ ಈ ನಾಟಕ ಆಡುವ ಪ್ರಮೇಯವೇನಿತ್ತೋ ಅರ್ಥವಾಗುತ್ತಿಲ್ಲ. ನಿನ್ನೆಯ ದಿನ ಫೋನ್ ಮಾಡಿ ಎಲ್ಲಿಗೋ ಹೋಗುವುದಿದೆ ಹೊರಟು ಬಾ ಇಷ್ಟೇ ಹೇಳಿ ಗಡಬಡೆಯಿಂದ ಕಾಲ್ ಮಾಡಿದ್ದ ಗಜಾನಣ್ಣ. ಏನೂ ಎತ್ತ ಎಂದು ತಿಳಿಯದೇ ಬೆಳಗ್ಗೆನೇ ತನ್ನ ಕಾರು ತೆಗೆದುಕೊಂಡು ಹೊರಟು ಬಂದಿದ್ದ. ರಾಮಚಂದ್ರನದು ಬಾಡಿಗೆ ಕಾರು ಹೊಡೆಯುವ ಕಾಯಕ. ಹಳ್ಳಿಯಕಡೆ ಇದ್ದವರಿಗೆ, ಅಷ್ಟೇನೂ ವಾಹನ ಸೌಕರ್ಯವಿಲ್ಲದ್ದರಿಂದಲೂ ಹಾಗೂ ಸ್ವಂತ ವಾಹನವಿಟ್ಟುಕೊಳ್ಳುವಷ್ಟು ಅನುಕೂಲವಿಲ್ಲದ್ದವರಿಗೂ ಈತನ ಕಾರಿನಲ್ಲೇ ಎಲ್ಲಾ ಕಾರೋಬಾರು. ಕೆಲವೊಬ್ಬರಿಗಂತೂ ಆರಂಭದ ಗಂಡು, ಹೆಣ್ಣು ಮಾತುಕಥೆಯಿಂದ ಹಿಡಿದು ಮದುವೆ ಮುಗಿಯುವವರೆಗಿನ ಎಲ್ಲಾ ಕಾರ್ಯಗಳಿಗೂ ಈತನ ಕಾರೇ ಬಳಕೆಗೆ ಬರುತಿತ್ತು. ಹೀಗಿದ್ದು ಮದುವೆ ಮಾತುಕಥೆಗಳಿಗೂ ಈತನದು ಎತ್ತಿದ ಕೈ. ಹೆಣ್ಣುಗಳ ಕಡೆಯಿಂದ ಗಂಡಿನವರ ಓಲೈಕೆಗೂ, ಗಂಡಿನ ಕಡೆಯವರಿಂದ ಹೆಣ್ಣಿನ ಓಲೈಕೆಗೂ ಪ್ರಸಿದ್ಧನಾದ್ದರಿಂದ ಇವನ ಕಾರಿನೊಂದಿಗೇ ಈತನೂ ಬಹುಬೇಡಿಕೆಯ ವ್ಯಕ್ತಿಯಾಗಿದ್ದ.
ಗಜಾನಣ್ಣನ ಮುಖಭಾವ ಸ್ವಲ್ಪ ಗಂಭೀರವಾಗೇ ಇದ್ದದ್ದ್ದರಿಂದ ಹೆಚ್ಚು ಮಾತನಾಡದೇ ಗಾಡಿ ಓಡಿಸಿದ್ದ. ಮಾತುಕಥೆಯಲ್ಲಿ ಏನಾದರೊಂದು ಇತ್ಯರ್ಥ ಮಾಡಲೇ ಹವಣಿಸುತಿದ್ದವರನ್ನು ನೋಡುತ್ತಿದ್ದವನಿಗೆ ಇಲ್ಲಿಯ ವಿಚಾರ ಅಯೋಮಯದಂತಿದೆ. ಹುಡುಗನ ಮನೆಯವರನ್ನು ನೋಡಿದರೆ ಒಳ್ಳೆಯ ಅನುಕೂಲಸ್ಥರಂತೆ ಕಾಣಬರುತಿದ್ದಾರೆ. ಅಲ್ಲದೇ ಬೇಕಾದಷ್ಟು ಗದ್ದೆ ತೋಟಗಳಿದ್ದು, ಉತ್ತಮ ಆದಾಯವೂ ಇದೆಯೆನಿಸುತಿದೆ. ಯಜಮಾನನ ನಡವಳಿಕೆಯೂ ಸಹ ಸುಸಂಸ್ಕøತವಾಗಿದೆ. ಉಪಚಾರವಂತೂ ಯಾವುದಕ್ಕೂ ಕಮ್ಮಿಯಿಲ್ಲದಂತೆ ನಡೆಸುತ್ತಿದ್ದಾರೆ. ಇಷ್ಟೆಲ್ಲಾ ಇದ್ದರೂ ಮೊಸರಿನಲ್ಲಿ ಕಲ್ಲು ಹುಡುಕುವ ಕಾಯಕ ಗಜಾನಣ್ಣನಿಗೆ ಏಕೆಂದು ತೋಚದೇ, ತನ್ನ ಮಾತಿನ ಅವಶ್ಯಕತೆ ಇಲ್ಲಿ ಎಲ್ಲಿದೆ ಎಂದು ಚಿಂತಿಸುತ್ತ ಸುಮ್ಮನೇ ಕುಳಿತಿದ್ದ.
“ನಮ್ಮನೆ ಮಾಣಿಗೆ ನಿಂಗ ಬಪ್ಪದೂ ಗೊತ್ತಿದ್ದೂ, ಅರ್ಜಂಟ್ ತ್ವಾಟಕ್ಕೆ ಹೋಗ್ಬತ್ತಿ ಹೇಳಿಕ್ಕೆ ಹೋಜ, ಇನ್ನೇನು ಬಪ್ಪ ಹೊತ್ತಾತಕ್ಕು. ಒಬ್ಬವ್ನೆ ಮಾಣಿನಲಿ, ಅದಕೆ ಎಲ್ಲಾ ಜವಾಬ್ದಾರಿ ಅವನ ಮೇಲೆ ಬಿಟ್ಟಿಗಿದಿ ಈಗ್ಲೇಯಾ” ಮನೆಯ ಯಜಮಾನ ತನ್ನ ಮಗನ ಕುರಿತು ಹೇಳತೊಡಗಿದ್ದು ಗಜಾನಣ್ಣನಿಗೆ ವಿಷಯಕ್ಕೆ ಬರಲು ಅನುಕೂಲ ಮಾಡಿಕೊಟ್ಟಂತಾಯಿತು.
ಗಜಾನಣ್ಣ, “ಹಂಗಿದ್ರೆ ಮಾಣಿ ಎಂತಾ ಓದಿದ್ದ?”
ಯಜಮಾನ, “ಡಿಗ್ರೀ ಮುಗ್ಸಿ ಬೆಂಗಳೂರಲ್ಲಿ ಎಂ.ಬಿ.ಏ. ಮಾಡಿದ್ದ. ಅವಾಗ್ಲೇ ನಿಮ್ಮನೆ ಮಗಳ ಪರಿಚಯ ಆಗಿದ್ದು ಹೇಳಿ ಹೇಳ್ತಿದ್ನಪ”
ಗಜಾನಣ್ಣ, “ಅಲ್ಲಾ, ಅಷ್ಟೆಲ್ಲಾ ಓದಿದ್ರೂ ಮನೆಲೇ ಇದ್ದಿದ್ದು ಸಾಕು. ಅದಲ್ದೇ ಮನೆಲಿಪ್ಪ ಮಾಣಿಗೆ ಕೂಸ್ಗ ಸಿಗದೇ ಇಪ್ಪ ಈ ಕಾಲದಲ್ಲಿ. ಅಲ್ದನಾ ರಾಮಚಂದ್ರ?”
“ಹೌದೌದು. ನನ್ ಜಾಯಮಾನದಲ್ಲಿ ಇನ್ನೂ ಒಂದೇ ಒಂದು ಮನೆಲಿಪ್ಪ ಮಾಣಿ ಮದುವಿಗೆ ದಿಬ್ಬಾಣ ಹೊಡದ್ನಿಲ್ಲೆ. ಮಾತು-ಕಥೆಗಷ್ಟೇ ಮುಗ್ದೋಗಿತ್ತು. ಅಲ್ಲಾ ನೀವು ಬೇಜಾರಾಗಡಿ, ಈಗೆಲ್ಲಾ ನಡಿತಾ ಇರ ವಿಷಯ ಮಾತಾಡದಿ ಅಷ್ಟೇ.” ಸಿಕ್ಕಿರೋ ಅವಕಾಶವನ್ನು ರಾಮಚಂದ್ರ ಬಳಸಿಕೊಂಡಿರುವುದನ್ನು ಕಂಡು ಗಜಾನಣ್ಣಂಗೆ ಮನಸಿನಲ್ಲೇ ಖುಷಿಯಾಗಿ, ಮೀಸೆಯಂಚಿನಲ್ಲೇ ನಕ್ಕಿದ್ದು ಅವನಿಗೂ ತಾನು ಗುರಿಯಿಟ್ಟಬಾಣ ತಲುಪಿದ್ದಕ್ಕೆ ಖುಷಿಯಾಯಿತು.
“ಅಲ್ದಾ, ಅವ್ರೆಂತಾ ಬೇಜಾರಾಗ್ತ್ರ ಮರಯಾ, ಇದ್ ವಿಷ್ಯ ಹೇಳದ್ಯಪ ನೀನು” ಎಂದ ಗಜಾನಣ್ಣ.
ಈಗ ಪ್ರಾರಂಭವಾದ ಸಂಭಾಷಣೆಯಿಂದ ಯಜಮಾನರಿಗೆ ಕಸಿವಿಸಿಯಾಯಿತಾದರೂ, ಹೊರತೋರಿಸದೇ, “ಒಬ್ನೇ ಮಾಣಿನಲಿ, ಅಲ್ದೇ ಇಲ್ಲೇ ನನ್ ಅಜ್ಜನ ಕಾಲದಿಂದನೇ ಬೇಕಷ್ಟು ಆಸ್ತಿ ಇರಕಿರೆ ಮನೆಬಿಟ್ಟು ಹೋಗಿ ದುಡ್ಯದಾದ್ರೂ ಎಂತಕ್ಕೆ ಹೇಳಿ ಮನೆಗೆ ಬಪ್ಲೇ ಹೇಳ್ಬಿಟಿ, ಮಗನೂ ಅದಕೆ ಇಲ್ಲೇ ಹೇಳಿದ್ನಿಲ್ಲೆ. ದುಡ್ಯದು ಅಂದ್ರೆ ಎಲ್ಲಿದ್ರೂ ದುಡ್ಯದೇಯಲಿ, ಹೇಳಿ ಇಲ್ಲೇ ಬಂದು ಇದ್ಬಿಟ.” ಎಂದೇಳಿ ಸುಮ್ಮನಾದರು.
“ನಮ್ಮನೆ ಕೂಸಿಗೆ ಬೆಂಗಳೂರಲ್ಲೆ ಇಪ್ಪ ಮಾಣಿ ನೋಡತಾ ಇದ್ದಿದ್ಯ. ಈಗಿನ ಕಾಲಕ್ಕೆ ತಕ್ಕಂಗೆ ಬದ್ಕಕಾತಲಿ, ಅಲ್ದಾ?” ಎಂದು ಏಳುತ್ತಾ, “ಸರಿ ಹಂಗಿದ್ರೆ ನಂಗ ಇನ್ನು ಹೊರಡ್ತ್ಯ, ಕಾರ್ ತಿರಗ್ಸಲೆ ಜಾಗಿದ್ದು ಅಲ್ದನಾ ರಾಮಚಂದ್ರ? ಹೊರಡನ ಹಂಗಿದ್ರೆ, ಹೋಯ್, ಎಲ್ಲಿದ್ಯೆ” ಎಂದು ಹೊರಡಲು ಅಣಿಯಾಗಿದ್ದರಿಂದ ಯಜಮಾನರು ಧಾವಂತದಲ್ಲಿ ಎದ್ದು, “ಮಾಣಿ ಇನ್ನೇನು ಬಪ್ಪ ಹೊತ್ತಾತಲಿ, ಮಾಣಿ ಒಂದ್ಸುತ್ತು ಮಾತಾಡ್ಸಕಂಡೆ...”
“ಇಲ್ಲೆ, ಇಲ್ಲೇ. ನಂಗೆ ಬೇರೆ ಕೆಲಸನೂ ಇದ್ದು. ಅದಕೆ ಈಗ್ಲೇ ತಡ ಆಗೋತು. ಹೊರಡದೇಯಾ, ಮಗಳಮಾತಿಗೆ ಕಟ್ಟುಬಿದ್ದು ಇವತ್ತೇ ಬರಕಾತು. ಎನಗಂತೂ ಇವತ್ತು ಬಪ್ಪಲೇ ಮನಸಿತ್ತಿಲ್ಲೆ” ಎಂದು ಹೇಳುತ್ತಾ ಯಜಮಾನರ ಮಾತನ್ನು ತುಂಡರಿಸಿ, ಸುಮ್ಮನಾಗಿಸಿಬಿಟ್ಟರು.
ಮನೆ ನೋಡಲು ಮಹಡಿ ಏರಿದ್ದ ಅನಸೂಯಕ್ಕ ಅಲ್ಲಿಂದ ಇಳಿದು ಬರುತ್ತಲೇ, “ಹೋಯ್, ಎಂತಾ ಗಡಿಬಿಡಿ ಮಾಡ್ತಿದ್ರಿ? ಶಿವರಾಮಬಾವನ ಮನಿಗೆ ಇವತ್ತು ನೆಂಟ್ರು ಬತ್ವಡ, ಅಲ್ದೇ ಅವನ ಕಾಲೂ ಉಳುಕಿ, ಹಾಸ್ಗೆ ಹಿಡದ್ನಡ. ಅಂವ ಇವತ್ತು ನಿಮ್ಸಂತಿಗೆ ಎಲ್ಲಿಗೂ ಬಪ್ಪಂವಲ್ದಡ. ನಿಂಗವಿಬ್ರೂ ಮಾರುತಿವ್ಯಾನು ನೋಡಲೆ ಹೋಪವಾಗಿತ್ತಲ್ದಾ? ಪದ್ಮಕ್ಕ ನಿನ್ನೆನೇ ಹೇಳಿತ್ತು, ನಂಗೆ ನಿಮಗೆ ಹೇಳಲೆ ಮರ್ತೇಹೋಗಿತ್ತು ನೋಡಿ, ಇಲ್ಲಿವರ್ಗೇ ಬಂದಾಜು, ಮಾಣಿನೂ ಒಂದ್ಸಲ ನೋಡ್ಕಂಡೇ ಹೋಪನ. ಕಡಿಗೆ ನಾಳಂಗೆ ಕೂಸು ಮಾಣಿ ಹೆಂಗಿದ್ದ ಕೇಳದ್ರೆ ನೀವು ಎಂತಾ ಹೇಳತ್ರಿ?” ಎಂದು ನುಡಿದು ನಗಲು ಪ್ರಂiÀiತ್ನಿಸುತ್ತಾ, ಗಂಡನ ಮುಖವನ್ನು ನೇರವಾಗಿ ನೋಡದೇ ರಾಮಚಂದ್ರನನ್ನು ನೋಡಿದಳು.
“ಹೌದಾ ಗಜಾನಣ್ಣ, ಹಂಗೇ ಮಾಡನ, ಅಕ್ಕಯ್ಯ ಎನಗೆ ಇನ್ನೊಂದು ಲೋಟ ಪಾನಕ ಬೇಕೆ” ಹೆಚ್ಚು ಹೆಂಗಸರ ಮಾತಿಗೇ ಹೂಂ ಗುಟ್ಟು ಅಭ್ಯಾಸವಿರುವ ರಾಮಚಂದ್ರ, ಈ ಮಾತನ್ನು ಹೇಳುತ್ತಾ ಕುಳಿತಲ್ಲೇ ಆಚೀಚೆ ಅಲುಗಾಡುತ್ತಾ ಮತ್ತೆ ತನ್ನ ಆಸನವನ್ನು ಭದ್ರಪಡಿಸಿಕೊಳ್ಳಲು ಹವಣಿಸಿದನು.
ಒಬ್ಬರಾದ ನಂತರ ಒಬ್ಬರು ಆಡಿದ ತನಗೆ ವಿರುದ್ಧ ಮಾತುಗಳನ್ನು ಕೇಳಿ, ಒಂಟಿಯಾಗಿದ್ದೇನೆನಿಸಿ ಕಕ್ಕಾಬಿಕ್ಕಿಯಾದದ್ದು ಮಾತ್ರಾ ಗಜಾನಣ್ಣ. ಆದರೂ ಅದನ್ನು ತೋರ್ಪಡಿಸಿಕೊಳ್ಳದೇ, “ಅದಲ್ದಾ ರಾಮಚಂದ್ರ, ಎನಗೆ ಪಂಚಾಯ್ತಿಲ್ಲೊಂದು ಅರ್ಜಿಕೊಡವು, ಅದು ಇವತ್ತೇ ಕೊನೆದಿನನಡ. ನಮ್ಮನೆವ್ಳಿಗೆ ಗೊತ್ತಿಲ್ದೇ ಹಲಬ್ತಪ. ನಡಿ ತಗ. ನಿಂಗೆ ಪಾನಕ ಎಂತು, ನಮ್ಮಲ್ಲಿ ಊಟ ಮಾಡ್ಸೇ ಕಳಸ್ತಿ ಆತ?” ನುಡಿದ ಮಾತಿಗೆ ರಾಮಚಂದ್ರ ಕುಂತಲ್ಲಿಂದ ತಣ್ಣಗೆ ಎದ್ದು, “ಬಾವ ಮತ್ತೆ ಸಿಗನ” ಎಂದೇಳಿ ಗಾಡಿಯ ಹತ್ತಿರ ದೌಡಾಯಿಸಿದನು.
ಅನಸೂಯಕ್ಕ ಮಾತ್ರಾ, ಗಂಡನ ಗಡಿಬಿಡಿಗೆ ತೇಪೆ ಹಾಕಲು ಪ್ರಯತ್ನಿಸುತ್ತಾ, “ಅಕ್ಕಯ್ಯ, ಮತ್ತೆ ಬತ್ನೆ ಹಂಗಿದ್ರೆ. ನಮ್ಮನೆವ್ರಿಗೆ ಹಂಗೇಯ. ಎಲ್ಲಾ ಕೆಲ್ಸನೂ ಒಟ್ಟಿಗೇ ಮುಗ್ದೋಗವಪ. ನಮ್ಮನೆ ಕೂಸತ್ರ ಕೇಳ್ಕ್ಯಂಡು ನಾ ಮಾಣಿನ ಫೋಟೋದಲ್ಲಾದ್ರೂ ನೋಡ್ತ್ನೆ” ಎಂದೇಳಿ ಅವರ ಮನೆಯನ್ನೆಲ್ಲಾ ನೋಡಿದ, ಮನೆಯಲ್ಲಿರುವ ಇಬ್ಬರೇ ಗಂಡ ಹೆಂಡತಿಯ ಸತ್ಕಾರವನ್ನೂ, ಸಿಕ್ಕ ಸ್ವಲ್ಪವೇ ಸಮಯವಾದರೂ ಸಿಹಿ ಸಿಹಿಯಾಗಿ ಮಾತನಾಡಿದ ಹುಡುಗನ ತಾಯಿಯ ಗುಣವನ್ನೂ ನೆನೆದು, ಇವಳೂ ನನ್ನಂತೆಯೇ ಎಂದು ಸಂತೋಷಿಸುತ್ತಾ ಗಾಡಿಯ ಹತ್ತಿರ ನಡೆದಳು.
ನೆಪ ಮಾತ್ರಕ್ಕೆ ನಗುತ್ತಾ, “ಬಾವ ಬತ್ನ ಹಂಗಿದ್ರೆ, ಮತ್ತೆ ಒಂದಿನ ಮಾತಾಡನ ತಗ,” ಎಂದಷ್ಟೇ ಹೇಳಿದ ಗಜಾನಣ್ಣನೂ, ಎಲ್ಲವೂ ತಾನು ಎಣಿಸಿದಂತೆ ಸಾಗಿ, ಕೊನೆಯ ಘಳಿಗೆಯಲ್ಲಿ ಹೆಂಡತಿಯೂ, ರಾಮಚಂದ್ರನೂ ತನ್ನ ವಿರುದ್ಧವಾಗಿ ಮಾತನಾಡಿ, ತನ್ನನ್ನು ಒಂಟಿಯಾಗಿಸಿ, ತನ್ನ ಯೋಜನೆಯನ್ನೆಲ್ಲಾ ಹಾಳುಮಾಡಲು ಪ್ರಯತ್ನಿಸಿದ್ದನ್ನು ಯೋಚಿಸುತ್ತಾ ಗಾಡಿಯತ್ತ ಸಾಗಿದನು.
ಗಾಡಿ ವೇಗವಾಗಿ ಚಲಿಸಿದಾಗಿನ ಧೂಳಿನ ನಡುವೆಯೇ ಪ್ರಾಯದ ಹುಡುಗನೊಬ್ಬ ಹೆಜ್ಜೆ ಹಾಕುತ್ತಿರುವುದು ಅಸ್ಪಷ್ಟವಾಗಿ ಎಲ್ಲರಿಗೂ ಕಾಣುತಿದ್ದರೂ, ಅದನ್ನು ಗಮನಿಸುವ ಗೋಜಿಗೆ ಯಾರೂ ಹೋದಂತಿರಲಿಲ್ಲ. ಎಲ್ಲರೂ ತಮ್ಮ ಪಾಡಿಗೆ ತಾವು ಮುಂದೆ ನಡೆಯುವ ಕಾರ್ಯದ ಬಗ್ಗೆ ತಮ್ಮ ತಮ್ಮ ಮಾತುಗಳನ್ನು ಹೇಗೆಲ್ಲಾ ನಡೆಸಿಕೊಳ್ಳಬಹುದು ಎಂದೂ, ತಮ್ಮ ಮಾತಿನ ಪಟ್ಟುಗಳಲ್ಲಿ ಯಾರನ್ನು ಹೇಗೆಲ್ಲಾ ಸಿಲುಕಿಸಿ ತಮ್ಮ ಮಾತುಗಳೇ ನಡೆಯುವಂತೆ ಮಾಡಬಹುದೆಂದು ಚಿಂತಿಸುತ್ತಾ   ಮೌನವಾಗೇ ಕುಳಿತಿದ್ದರು.
ಆ ಹುಡುಗ ಮಾತ್ರಾ ಕೈಲಿರುವ ಮೊಬೈಲ್ ಆ ಕ್ಷಣಕ್ಕೆ ಮೆಸೇಜ್ ಬಂದಿದ್ದರ ಸದ್ದಾಗಿ, ತೆಗೆದು ಓದಿದ, “ಅಪ್ಪ, ಅಮ್ಮ ಬಂಜ್ವ? ಮಾತುಕಥೆ ನಡಿತಿದ್ದ? ಎಂತಾ ಅಂದ?”
‘ಯಾರು ಎಂತಾ ಹೇಳ್ಕಂಡು ನಿರಾಕರಿಸಿದ್ರೂ, ನೀ ಮಾತ್ರಾ ನನ್ನ ಹೆಂಡ್ತಿ ಕೂಸೆಯಲೆ’ ಎಂದು ಮೀಸೆಯಂಚಲ್ಲೇ ನಕ್ಕು, ಮೊಬೈಲ ಮೇಲೆ ಕೈಯಾಡಿಸುತ್ತಾ ಹುಡುಗ ಮನೆಯ ಕಡೆ ಧಾಪುಗಾಲು ಹಾಕಿದ.
_ಮುಗಿಯಿತು.

ಸಣ್ಣಕಥೆ: 'ಅನಾಥ'



ಅನಾಥನಾಗಿ ಬಿದ್ದಿದ್ದೆ ರಸ್ತೆಯಲ್ಲಿ.

ಮಧ್ಯರಾತ್ರಿಯ ಸಮಯವಾದ್ದರಿಂದ ಇತ್ತಕಡೆ ಯಾರೂ ಸುಳಿದಾಡುವ ಲಕ್ಷಣಗಳೇನೂ ಕಂಡುಬರುತ್ತಿಲ್ಲ. ಕಾರಣ ಮುಖ್ಯರಸ್ತೆಯೇನೂ ಇದಲ್ಲ. ಸ್ವಲ್ಪ ದೂರದಲ್ಲೇನೋ ಒಂದು ಮನೆಯಿದೆ ಅನಿಸುತ್ತಿದೆ. ಆದರೆ ನನ್ನ ಕೂಗು ಅಲ್ಲಿಗೆ ಮುಟ್ಟಿಸುವಷ್ಟು ನನ್ನಲ್ಲಿಯೇ ತ್ರಾಣವಿಲ್ಲವಾಗಿದೆ. ತಲೆಯನ್ನು ಆಕಡೆ ಈಕಡೆ ತಿರುಗಿಸಿ ನೋಡುವಷ್ಟು ಶಕ್ತಿಯಿದೆಯಷ್ಟೇ. ನಾನು ಬಿದ್ದಾಗ ಬೈಕ್ ಸೀದಾ ನನ್ನ ಕಾಲ ಮೇಲೆ ಬಿದ್ದದ್ದರಿಂದ ಅಸಾಧ್ಯ ನೋವು ಕಾಲಿನಿಂದ ಮೇಲೆ ಸೊಂಟದ ಕಡೆಗೆ ಹರಿದು ಬರುತ್ತಿರುವುದನ್ನು ಹಲ್ಲು ಕಚ್ಚಿ ಹೇಗೋ ಸಹಿಸುತ್ತಿರುವೆ. ಅಸಾಧ್ಯ ನೋವಿನಿಂದಲೋ ಏನೋ ಅರೆಪ್ರಜ್ಞಾವಸ್ಥೆಗೆ ಜಾರಿದೆ. ಈಗ ಕಣ್ಣುಗಳು ಮಾತ್ರಾ ಮಿಟುಕಿಸುತ್ತ, ಆಕಾಶದಲಿ ಕಾಣುವ ಮಿಣು ಮಿಣು ನಕ್ಷತ್ರಗಳನು ನೋಡಲಷ್ಟೇ ಸಾಧ್ಯವಾಗಿದೆ.

“ಮನಸಿನ ಕೆಲವೊಂದು ವ್ಯವಹಾರಗಳಿಗೆ ನಾನೊಬ್ಬ ಪಾತ್ರಧಾರಿ, ಮತ್ತೆಲ್ಲವುಗಳಿಗೆ ನಾ ಮೂಕ ಪ್ರೇಕ್ಷಕ” ಎಂಬಂತೆ, ಈಗ ಮನಸಿನಲಿ ನಡೆವ ನಾಟಕಗಳಿಗೆ ನಾನೀಗ ಪ್ರೇಕ್ಷಕನಾಗಿದ್ದೇನೆ. ಪ್ರಜ್ಞೆಯಲ್ಲಿರುವಾಗ ನಾನು ಮಾಡಿದ್ದೇ ಸರಿಯೆಂಬ ತೀರ್ಮಾನಕ್ಕೆ ಬರುವವರು, ಅರೆಪ್ರಜ್ಞಾವಸ್ಥೆಯಲ್ಲಿ ಮಾತ್ರಾ ಮನಸಿನಲಿ ನಡೆವ ಸರಿ-ತಪ್ಪುಗಳ ವಿಶ್ಲೇಷಣೆಗೆ ಪ್ರೇಕ್ಷಕನಾಗಿರುವುದಕ್ಕಷ್ಟೇ ಸಾಧ್ಯವಾಗುತ್ತಿದೆ. ನಾನೀಗ ಪಾತ್ರಧಾರಿಯಲ್ಲ. ನನ್ನ ಪಾತ್ರವನ್ನು ಮತ್ತಾರೋ ನಿರ್ವಹಿಸುತ್ತಿರುವಂತೆ ಭಾಸವಾಗುತ್ತಿದೆ.

ಹೌದು. ಎಷ್ಟು ಸುಲಭ. ತಪ್ಪನ್ನು ಬೇರೆಯವರ ಮೇಲೆ ಹಾಕಿ ಜಾರಿಕೊಳ್ಳುವುದು. ಈಗಷ್ಟೇ ನಾನು ನೋಡಿದೆನಲ್ಲ. ಆತ ತಾನು ಮಾಡಿದ ತಪ್ಪನ್ನು ತನ್ನ ಟೀಂ ಮೇಂಬರ್ ಮೇಲೆ ದಾಟಿಸಿ ಎಷ್ಟು ನಿರಾಳವಾದ. ಇನ್ನು ತಪ್ಪು ಒಪ್ಪಿಕೊಂಡಿದ್ದರೆ ಏನಾಗಬಹುದಿತ್ತು? ಪ್ರಮೋಷನ್ ತಪ್ಪುತಿತ್ತು. ಅಷ್ಟೇ.
ಆದಿನ, ಆತ ತಪ್ಪು ಒಪ್ಪಿಕೊಂಡಿದ್ದರೆ ಪ್ರಮೋಷನ್ ಖುಷಿಯಲ್ಲಿ ಫ್ರೆಂಡ್ಸೊಟ್ಟಿಗಿನ ಪಾರ್ಟಿ ಈ ಮಧ್ಯರಾತ್ರಿಯವರೆಗೆ ನಡೆಯುತ್ತಿರಲಿಲ್ಲ. ಈಗ ನಾನು ಈ ಸ್ಥಿತಿಯಲ್ಲಿರುತ್ತಿರಲಿಲ್ಲ.

ತಪ್ಪಾದ್ದ ಒಪ್ಪಿಕೊಳ್ಳುವಿಕೆ ಅಷ್ಟು ಸುಲಭವೇ? ತಪ್ಪ ಮರೆಮಾಚುವ ಅಭ್ಯಾಸದ ಘಟನೆಗಳು ಈಗಿನವರೆಗೆ ಅಸಂಖ್ಯಾತ ನಕ್ಷತ್ರಗಳಷ್ಟೇ ಕಾಣಿಸಿಕೊಳ್ಳುತ್ತಿವೆ. ಒಂದೊಂದು ತಪ್ಪೂ ಒಂದೊಂದು ಅವಕಾಶವಾಗಿತ್ತು, ಒಪ್ಪಿಕೊಂಡು ತಿದ್ದಿಕೊಳ್ಳಲು.

ಅವುಗಳಲ್ಲೆದರ ಪ್ರತಿಫಲ.

ನಾನಿನ್ನೂ ಅನಾಥನಾಗೇ ಬಿದ್ದುಕೊಂಡಿರುವೆ.
~

ಚಿತ್ರ ಕೃಪೆ: ಗೂಗಲ್.


ಪುಟ್ಟ ಕಥೆ: 'ಶವ'



'ಸತ್ತವಳೇ.. ಎಲ್ಲಿ ಹಾಳಾಗಿ ಹೋಗಿದೀಯಾ?'

ಗಂಡನ ಕೂಗಿಗೆ ಓಡಿಹೋಗಿ ನಿಂತಳು ಅವಳು ಆತನ ಎದುರಿಗೆ.

ಅವಳನ್ನೇ ದುರುದುರು ನೋಡುತ, 'ಏನೇ ಹೆಣದಹಾಗೆ ನಿಂತ್ಯಲ್ಲ, ಈ ಕಾಲೊತ್ತು..' ಎನುತ ಅವಳೆಡೆಗೆ ಕಾಲು ಚಾಚಿ ಮಲಗಿದ ಆತ.

ಅವ ಹೇಳಿದೊಷ್ಟು ಹೊತ್ತೂ ಕಾಲೊತ್ತಿ ಬಂದಳು..

ನನ್ನ ಬಳಿ ಬಂದವಳೇ..

'ಮಗಾ.. ಸರಿಯಾಗಿ ಊಟಮಾಡೋ..' ಎಂದು ತುತ್ತ ಕಲಸಿ ನನ್ನ ಬಾಯೊಳಗಿಟ್ಟಾಗ..

 ಆ ಶವದ ಕಾರುಣ್ಯವ ಕಾಣುತ..

ನನ್ನ ಹೃದಯದಲಿ ಕುಳಿತ ದೇವರು, ಈ ಪುಟ್ಟ ಕಣ್ಣುಗಳ ತೇವವಾಗಿಸಿದ.
~
ಚಿತ್ರ: ಗೂಗಲ್.


ಇಳಿಜಾರು




‘ನೀನು ಮೊದಲ ಹಾಗಿಲ್ಲ’ ಎಂದು ಅವಳು ಬೇಸರದಿ, ನುಡಿದು ನಡೆದಾಗ..

‘ನಾನೇನು ಬದಲಾಗಿದ್ದೇನೆ? ನಿನಗೆ ನನ್ನಲ್ಲಿನ ಸಲಿಗೆ ಹೆಚ್ಚಾಗಿದೆಯಷ್ಟೇ. ನಾನೇನೂ ಬದಲಾಗಿಲ್ಲ’, ಎನ್ನುತ ತನ್ನ ತಾನು ಸಮರ್ಥಿಸಿಕೊಳ್ಳುವಾಗ ಮನಸಿನ ಒಂದು ಮೂಲೆಯಲ್ಲಿ ‘ಸುಳ್ಳು.. ಸುಳ್ಳು..’ ಎಂದು ಅರಚಿಕೊಳ್ಳುವುದು ಆತನ ಗಮನಕ್ಕೆ ಬಂದಿಲ್ಲ ಅಂತೇನೂ ಅಲ್ಲ, ತನ್ನ ತನವ ಅಷ್ಟು ಸಲೀಸಾಗಿ ಹೊರ ತೆರೆದಿಡಲಾದೀತೆ?

‘ಹೌದು ಕಣೇ ನಾನು ಬದಲಾಗಿದ್ದೇನೆ. ನಿನ್ನ ಮೊದಲಬಾರಿ ಕಂಡಾಗ ಹೊಳೆದಿದ್ದವು ಈ ಕಣ್ಣುಗಳು, ನೀನಾಡಿದ ಕೆಲವೇ ಕೆಲವು ಮಾತುಗಳನು ದುಂಬಿಯ ಝೇಂಕರಿಸಿದಾಗಿನ ಸದ್ದಿನಂತೆ ಆಹ್ಲಾದಿಸಿದ್ದೆ. ನಿನ್ನ ನಗುವಿಗೆ ನನ್ನ ನಗುವನೂ ಸೇರಿಸಿ ಹೊಂದಿಸಲು ಯತ್ನಿಸಿದ್ದೆ. ನಿನ್ನ ಕೆಂದಾವರೆಯ ಕೆನ್ನೆಯನೊಮ್ಮೆ ಚಿವುಟಬೇಕೆಂಬ ನನ್ನ ಕೈಬೆರೆಳುಗಳ ಆಸೆಯ ಹೇಗೋ ತಡೆಹಿಡಿದಿದ್ದೆ. ಅಷ್ಟು ಸಲೀಸಾಗಿ ನನ್ನ ತನವ ಹೊರಹಾಕಲಾಗುತ್ತದೆಯೇ?’

‘ಆಶ್ಚರ್ಯಕರ ಎಂಬಂತೆ ನಮ್ಮಿಬ್ಬರ ಪರಿಚಯ ಸ್ನೇಹವಾಯಿತು, ಆ ಮೊದಲ ಆಕರ್ಷಣೆಯು ಪ್ರೇಮದ ತುತ್ತೂರಿಯನೂ ಊದಿದ್ದೂ ಆಗಿ.. ಈಗ ಮಾತ್ರಾ ಅದನು ಊದಲು ಉಸಿರೇ ಖಾಲಿಯಾದಂತಾದರೂ, ಊದುವುದ ಬಿಡದೆ ಮತ್ತೆ ಮತ್ತೆ ಅದನ್ನೇ ಯತ್ನಿಸುತ್ತಿದ್ದರೆ, ಹೊರ ಬರುವ ಅಪಸ್ವರವ ನೀನು ಗಮನಿಸದೇ ಇರಲು ಸಾಧ್ಯವೇ? ಆ ಗಮನಿಸುವಿಕೆಯಿಂದಲೇ ಈ ದಿನ ಈ ಮಾತುಗಳನ್ನಾಡಿ ನಡೆದಿದ್ದು ನೀನು’.

‘ನನ್ನೊಳಗಿನ ಪ್ರೇಮ ನೀವೇದಿಸುವಕೊಳ್ಳುವವರೆಗೆ ನೀನು ಬಲು ಆಕರ್ಷಣೀಯವಾಗಿದ್ದ ನನಗೆ, ಬರುಬರುತ್ತಾ ಸಪ್ಪೆಯಾಗುತಿರುವೆ. ಪ್ರೇಮದಲಿ ಕುರುಡಾಗಿದ್ದ ನಾನು ನಿನ್ನನ್ನು ಪೂರಾ ಗಮನಿಸೇ ಇರಲಿಲ್ಲ. ಚಿತ್ತಾಕರ್ಷಕವಾಗಿದ್ದ ನೀನೀಗ ಚಿತ್ತಚಾಂಚಲ್ಯವನುಂಟುಮಾಡುತಿರುವೆ. ಹೇಳಿದ್ದೆ ಹೇಳಿ ಹೇಳಿ ಕೇಳಿಸುವ ನಿನ್ನ ಮಾತುಗಳು ಈ ತಲೆಗೆ ಎರಡು ಕಿವಿಗಳನು ಕೊರೆದಿದೆ. ನಿನ್ನ ನಗುವಲ್ಲಿನ ಬೆಳದಿಂಗಳೇ ಈಗಿಲ್ಲ. ಆ ಸೂರ್ಯನಂತೆಯೇ ನಾನೂ.. ಹಗಲಿಗೆ ಗೊತ್ತಾಗದಂತೆ ರಾತ್ರಿಯ ಬಚ್ಚಿಟ್ಟಂತೆ, ನನ್ನ ಭಾವಭ್ರಮಣೆಯನ್ನು ಮುಚ್ಚಿಡುತ್ತಲೇ ಬಂದರೂ.. ಸಂಜೆಯಗತ್ತಲನು ನೀನು ಗಮನಿಸದೇ ಇರಲು ಸಾಧ್ಯವೇ?’

‘ನೀನು ಜಾವದ ತಂಪು ಇಬ್ಬನಿ ಹನಿ, ಹೊತ್ತೇರುತ್ತಿದ್ದಂತೆ ಸುಡುತ್ತಿರುವಂತೆ ಅನಿಸುತಿರುವೆ. ಅದಕೆಂದೇ ನಿನ್ನ ಭಾರಕೆ ನಾ ಬಾಗಿದ ಎಲೆಯಾಗಿ ನಿನ್ನ ಜಾರಿಸಿಕೊಳ್ಳುವ ತವಕದಲ್ಲಿದ್ದಂತ್ತಿದ್ದೆ...

‘ಆದರೆ..ಆದರೆ.. ನೀ ಹೀಗೆ ನಡೆದಾಗ..ನೀ ನನ್ನೊಡನೆ ಹರಿದಾಗಿನ ತೇವ ನೆನಪಾಗಿ ಉಳಿದು ನನ್ನ ಕಾಡುತಿದೆಯಲ್ಲ!

ನಾನೇ ಬಾಗಿದ ಎಲೆಯೇ..? ನೀನೇ ನನ್ನಿಂದ ಜಾರುವಂತಿದ್ದೆನೇ?

ನನ್ನ ಅವಿವೇಕದ ಬಾಗು ನಿನ್ನ ಜಾರಿಸಿತು..!

ಛೇ! ಸಮಯ ಮೀರಿತೇ!

ಜಾರಬೇಡಗೆಳತಿ… ನನ್ನಿಂದ…

~


ಶನಿವಾರ, ಜನವರಿ 4, 2014

~ಸಂವೇದನೆ~


       ಮೌನದ ಕತ್ತಲು. ನದಿ ನೀರಿನ ಕಾಲದ ಹರಿತ. ಆ ಕ್ಷಣ ಆಕಾಶದತ್ತ ಚಿಮ್ಮಿ, ಮತ್ತೆ ತನ್ನತನವ ಸೇರಿತು. ಮತ್ತೆರಡು-ಮೂರು ಬಾರಿ ಆವರ್ತನ. ಯಾರದೋ ಆಕ್ರಂಧನ, ರೋಧನ. ಸ್ವಲ್ಪವೇ ಹೊತ್ತು. ಮತ್ತೆ ಅದೇ ಮೌನ. ಮೌನದ ಅರ್ಥ ಅಂತ್ಯ? ಅಲ್ಲಾ, ಆರಂಭ. ಹೊಸಹುಟ್ಟು. ಕಾಲದ ನವನಾಟಕದ ಆರಂಭಕ್ಕೆ ವೇದಿಕೆಯೇ ಮೌನ!
                                                               

                 ******

        ಆವರಿಸಿದ ರಾತ್ರಿಯ ಕತ್ತಲಾದರೋ ಗುರು-ಶಿಷ್ಯರಿಬ್ಬರನ್ನು ಮುಂದೋಗದಂತೆ ಕಟ್ಟಿಹಾಕಿತ್ತು. ಭಯಕ್ಕಲ್ಲ, ಅಭಯಕ್ಕೆ. ಸತ್ಕಾರ್ಯಗಳಿಗೆ ಕತ್ತಲಿನ ಹಸ್ತ ಯಾವಾಗಲೂ ಚಾಚಿಯೇ ಇರುತ್ತದೆ. ಸಕಲ ತಿರುವುಗಳಿಗೆಲ್ಲಾ ಕಾರಣ ಕತ್ತಲೆಯೇ! ಅದರೊಟ್ಟಿಗೆ ಕಾಲದ ಜೊತೆಯೂ ಸೇರಿಬಿಟ್ಟರಂತೂ, ಇತಿಹಾಸ ಸುವರ್ಣಪುಟ. 
         ಶಿಷ್ಯ ಬೇಡಿತಂದ ಭಿಕ್ಷೆಯಿಂದ ರಾತ್ರಿಯ ಊಟ ತಯಾರಿಸಲು ಉರಿಹೊತ್ತಿಸುತ್ತಿದ್ದನು. ಗುರು ದೀರ್ಘಮೌನದಲ್ಲಿ ಆಕಾಶದತ್ತ ಮುಖಮಾಡಿ ಧ್ಯಾನದಲ್ಲೆಂಬಂತೆ ಕುಳಿತಿದ್ದರು. ಪ್ರತಿವರ್ಷದ ಪರಿಪಾಠದಂತೆಯೇ ನಲವತ್ತೆಂಟು ದಿನಗಳಕಾಲ ಮೌನವ್ರತದಲ್ಲಿ ತನಗಿಷ್ಟನಾದ ಶಿಷ್ಯನೊಟ್ಟಿಗೆ ಊರಿಂದೂರಿಗೆ ಸುತ್ತುತ್ತಾ, ಕಟ್ಟಕಡೆಗೆ ಸಹಸ್ರಾರ ನದಿಯ ದಂಡೆಯ ತಲುಪಿದ್ದ ಆ ಗುರು.  

         ತನ್ನದೇ ನವಛಾಪನ್ನು ಬೀರುತ್ತಾ, ಉಳಿದ ಮಿಣುಕು-ಮಿಣುಕು ತಾರೆಗಳಿಗೆಲ್ಲಾ ತಾನೊಬ್ಬನೇ ಬೆಳಕುನೀಡುತ್ತಾ, ಉತ್ಸಾಹಿಸುತ್ತಿರುವನೋ ಎಂಬಂತಿದ್ದ ಧೃವ ನಕ್ಷತ್ರದ ಮೇಲಿನ ದೃಷ್ಟಿಯನ್ನು ಒಬ್ಬನೇ ವಟಗುಟ್ಟುತ್ತಿರುವ ಶಿಷ್ಯನ ಮೇಲೇ ಬೀರಿ, ಮನದೊಳಗೇ ನಕ್ಕ ಗುರು.
       
        ಮಾತಿಗೆ; ಮೌನವೆಂದು ಹೇಳಲು ಗೊತ್ತೇ ಹೊರತು, ಅದರ ಮರ್ಮ ತಿಳಿದಿಲ್ಲ. ಮೌನವೆಂಬ ಧ್ಯಾನದಾಳದಲ್ಲಿರುವ ಜ್ಞಾನದ ರಾಶಿಯೂ ಸಹ.  ಆ ಶಿಷ್ಯನಿಗೂ ಹಾಗೇ. ಮೌನ ಆತನ ಬಳಿ ವಾಸನೆಗೂ ಸುಳಿದದ್ದಿಲ್ಲ! ದಡ್ಡತನವು ಆಡುವ ಮಾತಿನಿಂದ, ಆಚರಿಸುವ ಕಾರ್ಯದಿಂದ ಗುರುತಿಸಲ್ಪಡುವುದು ತಾನೇ? ಅಂತೆಯೇ ಆ ಶಿಷ್ಯನೂ. 
        ಗುರು ತನ್ನ ಯಾತ್ರೆಗೆ ತನ್ನೊಟ್ಟಿಗೆ ಸಾಗಲು ಈತನನ್ನು ಆರಿಸಿದ್ದು ನೋಡಿ ಬೆಪ್ಪಲ-ಬೆರಗಾಗಿತ್ತು ಶಿಷ್ಯವೃಂದ. ಗುರು ಮಾರ್ಗ ಎಂದಿಗೂ ಛನ್ನ.
         
         ಮೊಳಕೆಯೊಡೆದು, ಜೀವಕ್ಕೆ ಉಸಿರನ್ನ, ಆಯಾಸಕ್ಕೆ ತಂಪನ್ನ, ಹಸಿವಿಗೆ ಫಲವನ್ನ ಕೊಡಲು ಹಾತೊರೆಯುತ್ತಿರುವ ಮೂಲವಂಶದಂತೆ; ಯಾತ್ರೆಯಲ್ಲಿನ ಗುರುವಿನ ಸಾಮೀಪ್ಯ ಶಿಷ್ಯನನ್ನು ಸೂಕ್ಷ್ಮವಾಗಿ ಬದಲಿಸುತಿತ್ತು. 
           ಉರಿಹೊತ್ತಿಸಿ, ಪಾತ್ರೆಯಲ್ಲಿ ಸ್ವಲ್ಪವೇ ನೀರಿರುವುದನ್ನು ನೋಡಿದ ಶಿಷ್ಯ, ನೀರು ತರಲು ಕತ್ತಲಲ್ಲೇ ಕಾಲಿ ಕೊಡದೊಡನೆ ನದಿಯಕಡೆ ತೆರಳಿದ. ನೆರಳು ಅವನನ್ನು ಹಿಂಬಾಲಿಸಲು ಯತ್ನಿಸಿ, ಸೋತು, ’"ತಾನೇ ಕತ್ತಲಾಗಿದ್ದೇನೆ, ಇನ್ಯಾಕೆ ಅನುಸರಣೆ!’" ಎನ್ನುವಂತೆ, ತನ್ನ ತಾ ಸಮಾಧಾನಿಸಿ, ಯೋಗ್ಯರನ್ನು ಅನುಸರಿಸಲೊಂದು ಯೋಗ್ಯತೆಯೂ ಬೇಕೆಂಬಂತೆ, ಉರಿಯ ಪಕ್ಕದಲ್ಲಿರಿಸಿಕೊಂಡ ಕಲ್ಲನ್ನೇ ಆಶ್ರಯಿಸಿ ತೆಪ್ಪಗಾಯಿತು. 
         
          ರಾತ್ರಿಯ ಪ್ರಶಾಂತತೆಯನ್ನು ತಾನೆಲ್ಲಿ ಭಂಗಮಾಡಿಯೇನೋ ಎಂಬ ಭಯದಿಂದಲೇ ಶಾಂತವಾಗಿಯೇ ತನ್ನ ಗಮ್ಯದ ಕಡೆ ಸಾಗುತಿತ್ತು ಸಹಸ್ರಾರ ನದಿ. ನದಿಯತ್ತ ತೆರಳಿದ ಶಿಷ್ಯ, ಬಾಗಿ ಕೊಡವನ್ನು ನೀರಿನಲ್ಲಿ ಮುಳುಗಿಸಿ ನೀರು ತುಂಬಿಸತೊಡಗಿದ. ನೀರು ತುಂಬುತ್ತಿದ್ದಂತೆಯೇ... ಬುಳು ಬುಳುಕ್... ಎಂದು ಸದ್ದು ಮಾಡುತ್ತಾ ಗಾಳಿ ಹೊರಹೋಗಿದ್ದು ಶಿಷ್ಯನಿಗೆ ವಿಚಿತ್ರವೆನಿಸಿ, ಮತ್ತೆ-ಮತ್ತೆ ಕೊಡವನ್ನು ಖಾಲಿಮಾಡಿ ನೀರು ತುಂಬಿಸುತ್ತಾ, ಆ ಸದ್ದನ್ನೇ ಕೇಳುತ್ತ ಏನೋ ಒಂದು ರೀತಿಯ ಆನಂದದಲ್ಲಿ ಮುಳುಗಿದ್ದ.
             ಶಿಷ್ಯನು ಕೊಡಕ್ಕೆ ದ್ಯೋತಿಸುವವನಾದರೆ, ಜ್ಞಾನ ನೀರು. ಜ್ಞಾನವಿದ್ದಲ್ಲಿ ಖಾಲಿತನವಿರಲು ಸಾಧ್ಯವೇ ಇಲ್ಲ.  
ಆ ಹೊತ್ತಿನಲ್ಲೇ, ಧುಡ್ ಢುಂ... ಎಂದು ದೊಡ್ಡದಾಗಿ ಸದ್ದು ಕೇಳಿಬಂದು, ಸುತ್ತಲೂ ನೀರು ಛಲ್ಲನೆ ಹಾರಿ ಶಿಷ್ಯನನ್ನು ತೋಯಿಸಿತು. ಸದ್ದು ಬಂದಕಡೆ ಕತ್ತೆತ್ತಿ, ಕತ್ತಲಲ್ಲೇ ನೋಟವನ್ನು ನಿರುಕಿಸಲು ಪ್ರಯತ್ನಿಸಿದ. ಕತ್ತಲಲ್ಲಿ ಏನು ತಾನೇ ಕಾಣಲು ಸಾಧ್ಯ? ಆದರೆ ಕಿವಿಗೆ ಮಾತ್ರಾ ಯಾವುದೋ ಆಕ್ರಂದನ ಕೇಳಿಬಂತು. ಅದು ಚಿಕ್ಕಮಗುವಿನದಂತಿತ್ತು. ಅಳುವಿಗೆ ಉಸಿರುಕಟ್ಟುತ್ತಿರುವುದು ಸ್ಪಷ್ಟವಾಗುತಿತ್ತು. ಹೆಚ್ಚು ಯೊಚಿಸದೆ ನೀರಿಗೆ ಇಳಿದ, ಶಬ್ದಬಂದಲ್ಲಿಗೆ ಈಜಿ, ಕೈಗೆ ತೊಡರಿದ ಏನನ್ನೋ ದಡಕ್ಕೆ ಎಳೆದು ತಂದ. ಕತ್ತಲಿಗೆ ಹೊಂದಿಕೊಂಡ ಕಣ್ಣುಗಳಿಂದ  ತಂದದ್ದನ್ನು ನೋಡಿ ಆಶ್ಚರ್ಯವಾಯಿತು. ಅದೊಂದು ಹೆಂಗಸಾಗಿತ್ತು! ಆ ಅವಳು ಒಂದು ಮಗುವನ್ನೂ ಸಹ ತನ್ನ ಬೆನ್ನಿಗೆ ಕಟ್ಟಿಕೊಂಡಿದ್ದಳು. ಮಗು ನೀರಿನಿಂದ ಬಿಡುಗಡೆಹೊಂದಿ; ಸಿಕ್ಕ ಉಸಿರನ್ನು ಒಮ್ಮೆಲೆ ತೆಗೆದುಕೊಂಡು ಕೆಮ್ಮುತ್ತಿದ್ದರೆ, ತಾಯಿ ಅಳಹತ್ತಿದಳು! ಇಬ್ಬರನ್ನೂ ಗುರುಗಳಿದ್ದಲ್ಲಿಗೆ ಕರೆತಂದು, ನಡೆದದ್ದನ್ನು ವಿವರಿಸಿದ.  

              ಗುರುವಾದರೋ ಶಾಂತವದನದಲ್ಲೇ ಅವಳತ್ತ ನೋಡಿ, ಯಾಕೆ ಹೀಗೆಂದು ಕಣ್ಣಿನ ಸನ್ನೆಯ ಮೂಲಕವೇ ಕೇಳಿ, ಅವಳು ಹೇಳಿದ ದುಃಖದ ಕಾರಣವ ಅರಿತು, ಸಮಸ್ಯೆಗೆ ಪರಿಹಾರವೆಂಬಂತೆ, ತಮ್ಮ ಕರಕಮಲಗಳಿಂದ ಅವಳ-ಮಗುವಿನ ಶಿರಗಳಮೇಲಿಟ್ಟು, ಸಮಾಧಾನಿಸಿ, ಆಶೀರ್ವದಿಸಿ, ಹಾರೈಕೆಯ ಸನ್ನೆಯನ್ನು ಮಾಡಿ ಕಳುಹಿಸಿದರು. ಅವಳಾದರೋ ತನ್ನ ದುಃಖವನ್ನೂ ಮರೆತಂತೆ, ಪ್ರಸನ್ನ ಮನಸ್ಸುಳ್ಳುವಳಾಗಿ ತೆರಳಿದಳು. 

             ನಡೆದ ಘಟನೆಗೆ ಸಾಕ್ಷಿಯಾಗುಳಿದ ಶಿಷ್ಯನಿಗೆ ಇದೆಲ್ಲವೂ ವಿಚಿತ್ರವೆನಿಸಿತ್ತು. ಮಗುವನ್ನೂ ಕಟ್ಟಿಕೊಂಡು ಘೋರವಾದ ಆತ್ಮಹತ್ಯೆಯನ್ನೇ ಮಾಡಿಕೊಳ್ಳುಲು ಹೊರಟವಳು, ಗುರುವಿನ ಸ್ಪರ್ಷಮಾತ್ರದಿಂದಲೇ ಸಮಾಧಾನಮಾಡಿಕೊಂಡು ನಗು-ನಗುತ್ತಲೇ ತೆರಳಿದ್ದು ವಿಸ್ಮಯವನ್ನುಂಟುಮಾಡಿತ್ತಲ್ಲದೇ, ಆ ರಾತ್ರಿಯನ್ನೂ ನಿದ್ದೆಯಿಲ್ಲದೇ ಕಳೆಯಿಸಿತ್ತು. ’‘ಇದು ಹೇಗೆ ಸಾಧ್ಯ?’ ಎಂದು ಗುರುಗಳ ಬಳಿ, ಮೌನವ್ರತದಲ್ಲಿರುವುದರಿಂದ ಪ್ರಶ್ನಿಸುವ ಹಾಗೂ ಇರಲಿಲ್ಲ. 
              
           ನಲವತ್ತೆಂಟು ದಿನಗಳ ಗುರುಗಳೊಟ್ಟಿನ ಪ್ರಭಾವ, ಅವನ ಮನದಲ್ಲಿ ಇಷ್ಟುಮಾತ್ರದ ತರ್ಕವನ್ನು ಜಾಗೃತಗೊಳಿಸುವಲ್ಲಿ ಶಕ್ಯವಾಗಿರುವುದು; ಸುಪ್ತ ಜ್ಞಾನವೆಂಬ ಗಾಳಕ್ಕೆ ಸಿಕ್ಕ ಮೀನಿನಂತಿದ್ದ. ಅದೇ ಪ್ರಶ್ನೆಗಳ ತಾಕಲಾಟದ ವಿಲಿ-ವಿಲಿ ಒದ್ದಾಟದಲ್ಲಿ, ಮಲಗಿದಲ್ಲಿ ಮಲಗಲಾಗದೇ ರಾತ್ರಿಪೂರ ಹೊರಳಾಟ ನಡೆಸಿದ. 
ಪ್ರಶ್ನೆಯೇ ಅವಗತಿಯ ಮೊದಲ ಮೆಟ್ಟಿಲಂತೆ!
          
           ಸಂಪೂರ್ಣ ರಾತ್ರೀ, ಧ್ಯಾನದಲ್ಲೇ ತಲ್ಲೀನನಾಗಿದ್ದ ಗುರು, ಜಗಚ್ಚಕ್ಷುವು ಪೂರ್ವದಿಗಂತದಲ್ಲಿ ಕಣ್ಣುತೆರೆಯುತ್ತಿಂದ್ದಂತೆ, ನಾಭಿಯಾದಿಯಿಂದ ’ಓಂ’ ಕಾರದೊಡನೆ; ಜಗವೇ ಮೌನದಾಳದಿಂದ ಎದ್ದುಬಂದು ಮೊದಲು ಹೊರಡಿಸಿದ ಇದೇ ನಾದೋಪಾದಿಯಲ್ಲಿ, ತಮ್ಮ ಮಂಡಲ ಕಾಲದ ಮೌನೋಪಾಸನೆಯಿಂದ ಹೊರಬಂದರು. ನದಿಗೆ ತೆರಳಿ, ನಿತ್ಯಕರ್ಮದ ಪ್ರಾತಃಕಾರ್ಯಗಳನ್ನು ಮುಗಿಸಿ, ಪುನಃ ತಮ್ಮ ಆಸನದಲ್ಲಿ ಕುಳಿತರು. ಶಿಷ್ಯನನ್ನು ಸಮೀಪಕ್ಕೆ ಕರೆದು, ಕುಳ್ಳಿರಿಸಿ ಹಸನ್ಮುಖರಾಗಿ, "ನೀನು ಈ ದಿನದ ಪರ್ಯಂತದವರೆಗೆ ಮಾಡಿದ ಸೇವೆಗೆ ಪ್ರತಿಕೂಲವಾಗಿ, ನಿನಗೇನು ಬೇಕೋ ಕೇಳುವಂತವನಾಗು, ಇದು ಸಹ ಪ್ರತಿವರ್ಷದ ರೂಢಿಯೇ ಆಗಿದೆ." ಎಂದರು. 



          ಪ್ರಶ್ನೆಯೊಂದನ್ನು ತಲೆತುಂಬಿಕೊಂಡು ರಾತ್ರಿಪೂರಾ ನಿದ್ರೆಗೆಟ್ಟ ಶಿಷ್ಯ ತನಗೇನುಬೇಕೆಂದು ಕೇಳಿಕೊಳ್ಳಲು ತೋಚದೇ, "ಗುರುವೇ, ನಿನ್ನೆಯದಿನ ಬದುಕಿಸಿದ ಹೆಂಗಸಿನ ತಲೆಯ ಮೇಲೆ ಕೈಯಿಟ್ಟ ತಕ್ಷಣ ಅಂತಹ ಬದಲಾವಣೆ ಅವಳಲ್ಲಿ ಹೇಗೆ ಸಾಧ್ಯವಾಯಿತು? ಇದರ ಮರ್ಮವನ್ನು ತಿಳಿಸಿಕೊಡಿ ಸಾಕು." ಎನ್ನುತ್ತಾ ಗುರುಗಳ ಉತ್ತರಕ್ಕೆ ನಿರೀಕ್ಷಿಸುತ್ತಾ ಕುಳಿತನು. 
ಗುರುವು ಆ ಪ್ರಶ್ನೆಗೆ ಉತ್ತರವೆಂಬತೆ ಒಮ್ಮೆ ನಕ್ಕು, ನುಡಿದರು, "ಈ ಸಂದರ್ಭಕ್ಕೆ ಅನುಗುಣವಾಗಿ ಒಂದು ಕಥೆಯನ್ನು ಹೇಳುತ್ತೇನೆ ಕೇಳು" ಎನ್ನುತ್ತಾ ಮುಂದುವರಿಸಿದರು,

        "ಪರಿಪಕ್ವವಾಗಿ ಬೆಳೆದ ಮಾವಿನಮರವು ಸಕಾಲ ಋತುವಿನಲ್ಲಿ, ಗೊಂಚಲು ಗೊಂಚಲಾಗಿ ಮಾವಿನ ಕಸ್ತ್ರವನ್ನು ಬಿಟ್ಟಿತ್ತು. ಅವುಗಳ ಕಂಪು ಸುತ್ತಣ ಪ್ರದೇಶದಲ್ಲಿ ಹರಡಿ ನೂತನ ಲೋಕವನ್ನೇ ಸೃಷ್ಟಿಸಿತ್ತು. ಪಕ್ಷಿಗಳಿಗೆ, ಅಳಿಲುಗಳಿಗೆ, ಮಂಗಗಳಿಗೆ ಆ ಎಳೆಯ ಕಸ್ತ್ರವನ್ನು ಮುರಿದು ತಿನ್ನುವುದೆಂದರೆ ಬಾರೀ ಸಂತೋಷ. ಅವುಗಳಾದರೋ ಚಿಲಿ-ಪಿಲಿಗುಟ್ಟುತ್ತಾ ರೆಂಭೆಯಿಂದ ರೆಂಭೆಗೆ ಹಾರಾಡುತ್ತಾ ತಮ್ಮ ಆಟಾಟೋಪಗಳಲ್ಲಿ ತಲ್ಲೀನವಾಗಿದ್ದವು. ಅವರ ಆಟಗಳಲ್ಲಿ ಮೈ ಮರೆತ ಮಾವಿನ ಮರವು ತನ್ನ ರೆಂಭೆ-ಕೊಂಭೆಗಳನ್ನು ಸ್ವಲ್ಪ ಹೆಚ್ಚೇ ಅಲ್ಲಾಡಿಸಿ, ತನ್ನ ಸಂತೋಷವನ್ನು ಹಂಚಿಕೊಂಡಿತ್ತು. ಆ ಕ್ಷಣದಲ್ಲಿ ಅನೇಕ ಕಸ್ತ್ರಗಳು ನೆಲಸೇರಿದವು! 

        ಕಾಲ ಸರಿದಂತೆ ಕಸ್ತ್ರಗಳು ಬೆಳೆದು, ಚಿಕ್ಕ ಚಿಕ್ಕ ಮಿಡಿಗಳಾಗಿ ಮೂಡತೊಡಗಿತು. ಆಗ ಮಾವಿನ ಮರವನ್ನು ಅರಸಿ ಬಂದವರು ಚಿಕ್ಕ ಮಕ್ಕಳು. ತಮ್ಮ ಎಳೆ ಕೈಗಳಿಂದ ಎಳೆ-ಎಳೆಯಾದ ಹಸಿರಾದ ಮಿಡಿಗಳನ್ನು ಕೊಯ್ದು-ಕೊಯ್ದು ತಮ್ಮ ಬುಟ್ಟಿಗಳಿಗೆ ತುಂಬಿಸಿಕೊಂಡರು. ಅವರ ಉತ್ಸಾಹಕ್ಕೆ ಅಂಬು ನೀಡುತ್ತಾ ಮರವು ಬಾಗಿ ಬಾಗಿ ತನ್ನನ್ನು ತಾನು ಅವರಿಗೆ ಸಮರ್ಪಿಸಿಕೊಂಡು ಅವರ ಸಂತೋಷದಲ್ಲಿ ತಾನೂ ಭಾಗಿಯಾಯಿತು. 
      ನಂತರ, ಅಳಿದುಳಿದ ಮಾವಿನ ಮಿಡಿಗಳು ತಮ್ಮ ಪ್ರಾಯದ ಸ್ಥಿತಿಗೆ ಕಾಲಿಟ್ಟಿದ್ದವು. ಈಗ ದಾಳಿಯಿಟ್ಟಿದ್ದು ಮಾನವನ ದೊಡ್ಡ-ದೊಡ್ಡ ಕೈಗಳು.  ಕಾಯಿಯನ್ನೇ ಕೊಯ್ದು ಮನೆಗಳಲ್ಲಿ ಇಟ್ಟು, ಹಣ್ಣು ಮಾಡಿ, ಮಾರುವುದಕ್ಕೋಸ್ಕರ ಕೊಯ್ದುಹೋದರು. ಸಹಜಗುಣದ ಪ್ರಕೃತಿಮಾತೆಯ ಮಡಿಲಲ್ಲಿ ಬೆಳೆದು, ಅದರ ಸ್ವಭಾವವನ್ನೇ ಮೈತಳೆದ ಮರ ಯಾರಿಗೆ ತಾನೇ ಅಡ್ಡಿಯಾದೀತು?
        ಇವೆಲ್ಲಾ ಕಾರ್ಬಾರೂ ನಡೆಯುತ್ತಿರುವಾಗಲೇ ಸ್ವಲ್ಪ ಎತ್ತರದ ರೆಂಭೆಯಲ್ಲಿ ಉಳಿದುಹೋಗಿತ್ತು ಮಾವಿನಕಾಯೊಂದು! ಇಡೀ ಮರದಲ್ಲಿ ಈಗ ಅದೊಂದು ಮಾತ್ರಾ. 
          ಪ್ರಕೃತಿಯ ಆಕ್ರಮಣ ಈಗ ಮರದ ಮೇಲೆ ಮೊದಲಾಯಿತು. ಜೋರು ಮಳೆ-ಗಾಳಿಯಿಂದ ಬೇರುಸಮೇತ ಕಿತ್ತೇ ಹೋಗುವಷ್ಟು ಅಲ್ಲಾಡಿತು. ತಾಯಿಯು ಮಗುವನ್ನು  ಎಂತಹ ಕಷ್ಟದ ಸಮಯದಲ್ಲೂ ಬಿಡದೇ, ಸಾಂತ್ವಾನ ನೀಡುವಂತೆ, ಕಾಯಿಯನ್ನು ಮಾತ್ರಾ ಅದು ಬಿಡಲಿಲ್ಲ. 
           ಪೂರ್ಣ ಮರದ ಪೋಷಣೆ ಆ ಅದಕ್ಕೇ ದಿನದಿಂದ ದಿನಕ್ಕೆ ದೊರಕುತ್ತಾ ಹಣ್ಣಾಗುವ ಕಾಲ ಸನಿಹವಾಯಿತು. ಪುಷ್ಟವಾಗಿ ಬೆಳೆದು ಕಂದುಬಣ್ಣಕ್ಕೆ ಹೊರಮೈ ತಿರುಗುತ್ತಿದ್ದರೆ, ಆಂತರ್ಯದಲ್ಲಿನ ವಾಟೆಯ ವಿಕಾಸಕ್ಕೂ ಕೊರತೆಯಿರಲಿಲ್ಲ. ಕಾಲದ ನಿಯಮವೇ ಹಾಗೇ. ಕ್ಷಣ-ಕ್ಷಣವೂ ಬಾಹ್ಯ-ಆಂತರಿಕವಾಗಿ ಪರಿಪೂರ್ಣತೆಯನ್ನ ತುಂಬುತ್ತಲೇ ಇರುತ್ತದೆ. 

          ಜ್ಞಾನಿಯಾದವನು ಸಕಲ ಬಂಧಗಳನ್ನೂ ಸಡಿಲಿಸಿಕೊಳ್ಳುವಂತೆ, ಹಣ್ಣು ಸಕಾಲದಲ್ಲಿ ಪರಿಪಕ್ವವಾಗಿ ತೊಟ್ಟು ಕಳಚಿ ನೆಲವ ಸೇರಿತು.

              ಹಸಿರ ಹುಲ್ಲಿನ ಮೇಲೆ ಎದ್ದು ಕಂಡ, ಕೆಂಪಾದ ದೊಡ್ಡದಾದ ಹಣ್ಣನ್ನು ಗಿಡುಗವೊಂದು ಮಾಂಸವೆಂದು ಭ್ರಮಿಸಿ ಹೊತ್ತೊಯ್ದು, ಊರಿನ ಸಮೀಪದ ಮತ್ತೊಂದು ಮರದಮೇಲೆ ಕುಳಿತು ಅದನ್ನು ಕುಕ್ಕತೊಡಗಿ, ಅದು ಹಣ್ಣೆಂದು ಅರಿತಮೇಲೆ, ಅಲ್ಲಿಯೇ ಬಿಟ್ಟು ಹಾರಿಹೋಯಿತು. 
       
           ಮರದಿಂದ ಪುನಃ ಬೀಳತೊಡಗಿದ ಹಣ್ಣು ಈಗ ಸೇರಿದ್ದು ನೆಲವನ್ನಲ್ಲ. ಎರಡು ದಿನದಿಂದ ಹಸಿದು ಮಲಗಿರುವ ಒಬ್ಬ ಬಡವನ ಮಡಿಲನ್ನ. ಮೇಲಿಂದ ಬಿದ್ದು, ತನ್ನ ಮಡಿಲನ್ನೇ ಸೇರಿದ ಹಣ್ಣನ್ನು ದೇವರ ಪ್ರಸಾದವೆಂದೇ ತಿಳಿದ ಬಡವ, ಅದನ್ನ ತೆಗೆದುಕೊಂಡುಹೋಗಿ ಮನೆಯಲ್ಲಿರುವ ಮಕ್ಕಳಿಗೂ-ಹೆಂಡತಿಗೂ ಕೊಯ್ದು ಹಂಚಿದ. ಸಂಪೂರ್ಣ ಪೋಷಣೆಯಿಂದ ಪರಿಪೂರ್ಣವಾದ ಹಣ್ಣು ಅಷ್ಟೂ ಜನರ ಹಸಿವನ್ನು ಇಂಗಿಸುವಷ್ಟು ಸಮರ್ಥವಾಗಿತ್ತಲ್ಲದೇ, ಹಸಿವಿನಿಂದ ಬಾಡಿದ ಮೊಗಗಳಲ್ಲಿ ಈಗ ಹಣ್ಣಿನ ಕಳೆಯನ್ನೇ ಕಟ್ಟಿಸಿತ್ತು. 
      
          ಬಡವ ಅಷ್ಟಕ್ಕೆ ಸುಮ್ಮನಾಗಲಿಲ್ಲ, ಆ ಉಳಿದ ಒರಟೆಯನ್ನು ಅಂಗಳದಲ್ಲಿ ಕುಣಿತೋಡಿ ಹುಗಿದು, ನೀರೆರೆದ.
ಅದೀಗ ದೊಡ್ಡದಾಗಿ ಬೆಳೆದು ನೆರಳನ್ನೂ, ಹಣ್ಣನ್ನೂ ನೀಡುತ್ತಾ ಜೀವನವನ್ನು ಸಾರ್ಥಕ ಗೊಳಿಸುತ್ತಿದೆ. ನಮ್ಮ ಜೀವನವೂ ಆ ಕಸ್ತ್ರ, ಮಿಡಿ, ಕಾಯಿ ಹಾಗೂ ಹಣ್ಣುಗಳಹಾಗೇ. ಆಗ ಬಂದ ಹೆಂಗಸು ಈಗಷ್ಟೇ ಕಸ್ತ್ರಿನ ರೂಪದಲ್ಲಿರುವಳು. ಅಲ್ಪ ಪ್ರಮಾಣದ ದುಃಖಕ್ಕೂ ನಿರಾಸೆಹೊಂದಿ ಆತ್ಮಹತ್ಯೆಮಾಡಿಕೊಳ್ಳುವಷ್ಟು ಘೋರಪಾತದ ವಿಚಾರವನ್ನು ಮಾಡುತ್ತಾಳೆ. ಅಂತವರಿಗೆ ಬೇಕಾಗಿರುವುದು ನಿಜ ಸಾಂತ್ವನವಷ್ಟೇ. ತಮಗೋಸ್ಕರ ಇರುವರು ಎನ್ನುವ ಧೈರ್ಯದ ಬಲವೇ ಮತ್ತೆ ಜೀವನವ ಎದುರಿಸಲು ಸಿದ್ದಗೊಳಿಸುತ್ತದೆ. ನಾನು ಅವಳಿಗೆ ನೀಡಿದ್ದೂ ಅಷ್ಟು ಮಾತ್ರದ ಅನುಗ್ರಹವೇ.




             ಆ ಕಥೆಗೆ ಈಗ ನಿನ್ನನ್ನು ಹೋಲಿಸಿ ನೊಡು. ನೀನು ಜ್ಞಾನದಲ್ಲಿ ಕಾಯಿಯಂತಿದ್ದೀಯೆ. ಪ್ರಕೃತಿಯ ಸಂಪೂರ್ಣ ಪೋಷಣೆಯ ಗ್ರಹಿಸಲು ನೀನು  ಶಕ್ಯವಾಗುವಂತೆ ಮಾಡುವುದು ಗುರುವಾದ ನನ್ನ ಕಾರ್ಯವಾಗಿತ್ತು. ಆ ಹಣ್ಣಿನ ಗಮ್ಯವೇ ನಿನ್ನದಾಗಲಿ." ಎಂದು; ತುಂಬು ಮುಖದಿಂದ  ಶಿಷ್ಯನಿಗೆ ಗುರುವು ಆಶೀರ್ವದಿಸಿದರು.

-ಮುಗಿಯಿತು.


*ಚಿತ್ರ ಕೃಪೆ- ಗೂಗಲ್.

ಬುಧವಾರ, ಸೆಪ್ಟೆಂಬರ್ 5, 2012

"ಜನನಿ ತಾನೇ ಮೊದಲ ಗುರು"


"ರೊಂಯ್.....ರೊಂಯ್ ರೊಂಯ್ ರೊಂಯ್....."
         ನಾಲ್ಕು ವರ್ಷದ ಮಗ; ರಸ್ತೆಯಲ್ಲಿ ಅಮ್ಮ ಕೊಡಿಸಿದ ಪುಟ್ಟ ಕಾರಿನೊಡನೆ ಆಡುತ್ತಿದ್ದ. 
        ಎರಡು ವರ್ಷಕ್ಕೊಮ್ಮೆ ಬರುವ ಊರಿನ ಜಾತ್ರೆ ಅದ್ದೂರಿಯಿಂದಲೇ ಸಾಗುತ್ತಿದ್ದು, ಬಂದು ಹೋಗುವ ಜನ ಬಹಳೇ ಇದ್ದರು. ಆ ಸಮಯದಲ್ಲೇ ಎದುರು ಬಂದುನಿಂತ, ಅವನಿಗಿಂತ ಒಂದು-ಎರಡು ವರುಷದ ಹುಡುಗನನ್ನ; ಅವನು ಸುಮ್ಮನೇ ನಿಂತಿರುವುದನ್ನ ನೋಡಿ ತನ್ನ ಆಟದಲ್ಲಿ ಸೇರಿಸಿಕೊಂಡ. ಮಗ ಆಟವೇ ಆತನಾಗಿದ್ದನೋ ಎಂಬಂತೆ ಆತನೊಟ್ಟಿಗೆ ಆಟದಲ್ಲೇ ಮೈ-ಮರೆತ. ಕೆಲವು ಸಮಯ ಜೊತೆ ಸೇರಿ ಆಡುತ್ತೇ ಇರುವಂತಹ ಹುಡುಗ ಮಗನ ಕೈಯಲ್ಲಿರುವ ಕಾರನ್ನ ಕಸಿದುಕೊಂಡಿದ್ದೇ; ಒಂದೇ ಓಟ! ಮಗನಾದರೋ ಅವನನ್ನ ಅಟ್ಟಿಸಿ ಹಿಡಿಯಲು ಅಸಹಾಯಕನಾಗಿ, ಅಳುತ್ತಾ ಅಮ್ಮನಲ್ಲಿಗೆ ಬಂದ. 
         ಕಾಲಿ ಕೈಯಿಂದ, ಕಣ್ಣಿನ ತುಂಬಾ ನೀರನ್ನ ತುಂಬಿಕೊಂಡು ಬಂದ ಮಗ, ಬಿಕ್ಕಿ ಬಿಕ್ಕಿ ಅಳುತ್ತಾ ನಡೆದ ವಿಷಯವನ್ನ ಹೇಳಲು ಪ್ರಯತ್ನಿಸುತ್ತಾ, ಪೂರ್ತಿಗೊಳಿಸಲಾಗದೇ ಜೋರಾಗಿ ಅಳತೊಡಗಿದ. ವಿಷಯವನ್ನ ಅರ್ಥಮಾಡಿಕೊಂಡ ಅಮ್ಮ ಮಗನನ್ನ ಸಮೀಪ ಕರೆದು, ಮಡಿಲಲ್ಲಿ ಕುಳ್ಳಿರಿಸಿ, ಕಣ್ಣೀರನ್ನು ಒರೆಸುತ್ತಾ ಸಾಂತ್ವಾನದ ಧನಿಯಲ್ಲಿ, "ಯಾಕಪ್ಪಾ ಅಳುವುದು? ಹೋದಿದ್ದು ಹೋದದ್ದಾಯಿತಲ್ಲಾ! ಹೊಸತೊಂದು ತಂದರಾಯಿತು. ಅಷ್ಟಕ್ಕೇ ಯಾಕಿಷ್ಟು ಅಳುವುದು? ಬಾ ಇನ್ನೊಂದು ಕೊಡಿಸುತ್ತೇನೆ" ಎನ್ನುತ್ತಾ ಮತ್ತೆ ಜಾತ್ರೆಯ ಪೇಟೆಗೆ ಕರೆದೊಯ್ದು, ಹೊಸಕಾರನ್ನ ತೆಗೆಸಿ, ಮಗನ ಕೈಯಲ್ಲಿ ಇಡುತ್ತಾ, ಕಿಲ-ಕಿಲ ನಗುವನ್ನೂ ಮಗುವಿನ ಮುಖದಲ್ಲಿ ತುಂಬಿದಳು.
"ದಾರಿಯಲ್ಲಿ ಸಾಗುವವರನ್ನ ಆಟಕ್ಕೆ ಸೇರಿಸಿಕೊಂಡ ನಂತರ, ಇನ್ನಾದರೂ ಸ್ವಲ್ಪ ಜಾಗೃತೆಯಿಂದಿರು" ಎನ್ನುತ್ತಾ, ನಗು ಮುಖದಿಂದಲೇ ಮತ್ತೆ ಮಗನನ್ನ ಆಟಕ್ಕೆ ಕಳುಹಿಸಿದಳು.
                                                                                 *****
"ತಮಾ..."
".........................."
"ಏ ತಮಾ.........."
"ಏನಮ್ಮಾ...?"
"ಮನೆಗೆ ಬಾರೋ..."
"ಇನ್ನೊಂದು ಸ್ವಲ್ಪಹೊತ್ತು ಆಡಿ, ಬರುತ್ತೀನಮ್ಮಾ"
"ಆಡಿದ್ದು ಸಾಕು, ಬಾ ಬೇಗ"
        "ಊ ನ್ಹೂಂ... ಈಗ ಬರಲ್ಲ" ಎಂದಿದ್ದೇ ತಡ, ರಪ್ಪನೇ ಬೆನ್ನಿಗೊಂದು ಏಟು ಬಿದ್ದದ್ದು, ಅದರ ಬೆನ್ನಹಿಂದೆ-ಹಿಂದೆಯೇ ಇನ್ನೂ ನಾಲ್ಕು ಏಟು ರಫ-ರಫನೇ ಬಿದ್ದದ್ದೂ ಆಯಿತು. ದರ-ದರನೇ ಅಮ್ಮ ಮಗನನ್ನ ಮನೆಗೆ ಎಳೆದೊಯ್ದು, ಬಿಟ್ಟಳು.
ಚಿಕ್ಕವನಾಗಿದ್ದಾಗಿಂದ ಹಿಡಿದು ಈಗಿನ ಒಂಬತ್ತು ವಯಸ್ಸಿನ ವರೆಗೂ ಅಮ್ಮನ ಕೈಯಿಂದ ಏಟು ತಿಂದ ದಾಖಲೆಯೇ ಇಲ್ಲ. ಆದರೆ ಈಗ ಮೊದಲಬಾರಿ ಅಮ್ಮ  ತನ್ನ ಕೈರುಚಿ ಏಟಿನ ಮೂಲಕ ತೋರಿಸಿದ್ದಳು. ಬೆನ್ನು ಚುಮು ಚುಮುಗುಡುತ್ತಿತ್ತು. ಅಮ್ಮನ ಹತ್ತಿರ ಏಟು ತಿಂದೆನಲ್ಲ ಎಂದು ಮನಸ್ಸು ನೋಯುತಿತ್ತು. ಹಾಗೇ ಕೆಲವು ದಿನಗಳಲ್ಲಿಯೇ ಏಟಿನ ನೋವು ಮರೆಯಾಯಿತು. ಆದರೆ ಹೊಡೆಸಿಕೊಂಡದ್ದು ಮಾತ್ರಾ ಮನಸ್ಸು ಮರೆತಿರಲಿಲ್ಲ; "ಮೊದಲ ಬಾರಿ ಹೊಡೆಸಿಕೊಂಡ ಏಟು ಹೇಗೆ ತಾನೇ ಮರೆಯಲು ಸಾಧ್ಯ? ಮತ್ತಲ್ಲದೇ ಅದೇ ಮೊದಲನೆಯದು ಮತ್ತು ಕೊನೆಯದೂ ಕೂಡ. ಅದೂ ಅಲ್ಲದೇ, ಕಾರಣವಿಲ್ಲದೇ ಏಟು ತಿಂದದ್ದು ಬೇರೆ! ಪೆಟ್ಟು ತಿನ್ನುವಂತಹ ಕೆಲಸ ಏನು ಮಾಡಿದ್ದೆ ನಾನು?", ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಆಗಾಗ ಮೂಡುತ್ತಾ ಮರೆಯಾಗುತಿತ್ತು. 
            ಮನಸ್ಸು-ವಯಸ್ಸು ಬಲಿತ ಮೇಲೆ ಅಮ್ಮನನ್ನೇ ಪ್ರಶ್ನಿಸಿದ ಮಗ, "ಅಮ್ಮಾ, ಆ ದಿನ ನಿನಗೆ ನೆನಪಿದೆಯೇ? ನೀನು ನನಗೆ ಮೊದಲಬಾರಿ ಹೊಡೆದಿದ್ದು. ಯಾಕಮ್ಮಾ ಅವತ್ತು ನನಗೆ ಹೊಡೆದಿದ್ದು? ನಾನು ಆಟವಾಡುತ್ತಿದ್ದದ್ದು ತಪ್ಪಾಗಿತ್ತಾ?"
ಅಮ್ಮ ಹೇಳಿದಳು," ಇಲ್ಲಪ್ಪಾ ನಿನ್ನದು ತಪ್ಪು ಏನೂ ಇಲ್ಲಾ. ಆ ದಿನದ ಸಂದರ್ಭ ನನಗೆ ಹಾಗಿತ್ತು. ನಾವು ಇರುವುದೇ ಬೇರೆಯವರ ಮನೆಯಲ್ಲಿ. ಆ ಮನೆಯವರು ಆ ದಿನ ನಿನಗೆ ಬಯ್ಯುತ್ತಿದ್ದರು, ’ಇಡೀ ದಿನ ಆಟವಾಡುತ್ತಿರುತ್ತಾನೆ, ಒಂದು ಕಡ್ಡಿ ಕೆಲಸ ಮಾಡಲ್ಲಾ, ಸುಮ್ಮನೇ ಕೂಳುದಂಡ’ ಹೀಗೆ... ಅವರು ನಿನಗೆ ಆಡುತ್ತಿರುವ ಬೈಗುಳದ ನೋವನ್ನ ನನ್ನ ಹತ್ತಿರ ತಡೆಯಲಾಗಲಿಲ್ಲ. ಅದನ್ನ ಹೇಗಾದರೂ ತೀರಿಸಿಕೊಳ್ಳಬೇಕಾಗಿತ್ತಲ್ಲ, ಅದಕ್ಕೇ ನಿನಗೆ ಹೊಡೆದೆ. ನನ್ನ ನೋವನ್ನ ತೋರಿಸಿಕೊಳ್ಳಲು ನನಗಾದರೂ ಮತ್ಯಾರಿದ್ದರೋ?"
                                                                         ******
ಮಗ ಮತ್ತೂ ದೊಡ್ಡವನಾಗಿದ್ದ. 
          ಒಂದು ದಿನ ಜೇಬಿನೊಳಗಿರುವ ಹಣವಿದ್ದ ಪರ್ಸನ್ನ ಕಳೆದುಕೊಂಡು ಬಂದಿದ್ದ. ಮನೆಯಲ್ಲಿರುವ ಅಮ್ಮನಿಗೆ ಈ ವಿಷಯ ಹೇಳಿರಲೇ ಇಲ್ಲ.(ಅಮ್ಮ ಸುಮ್ಮನೇ ಬೇಜಾರು ಮಾಡಿಕೊಳ್ಳುತ್ತಾಳೆಂದೋ, ಸುಮ್ಮನೇ ಅವಳಿಗೆ ಕಿರಿ-ಕಿರಿ ಯಾಕೆಮಾಡುವುದೆಂದೋ ಇರಬೇಕು ಅಥವಾ ಬೈಯ್ಯುತ್ತಾಳೆಂದೂ ಇರಬೇಕು!!) ಆದರೆ ಮಗನ ಗುಟ್ಟು ಮನೆಯಲ್ಲಿ ರಟ್ಟಾಗದೇ? ಅಮ್ಮನಿಗೆ ಹೇಗೋ ವಿಷಯ ಗೊತ್ತಾಗಿಬಿಟ್ಟಿತು. ಬಂದು ವಿಚಾರಿಸಿದಳು, 
"ಪರ್ಸ್ ಇಲ್ವಲ್ಲಾ, ಎಲ್ಲಿ?"
ವಿಷಯಗೊತ್ತಾಗಿ ಬಿಟ್ಟಿದೆ, ಇನ್ನು ನಿಜ ಹೇಳಬೇಕಾದ್ದೇ!
"ಕಳೆದು ಹೋಗಿದೇಮ್ಮಾ..."
"ಹಯ್ಯೋ... ಎಷ್ಟು ಹಣವಿತ್ತೋ...?"
ಇದ್ದದ್ದೂ ಸಾವಿರವೇ ಆದರೂ ಮಗ ತಮಾಷೆ ಮಾಡಲೆಂಬಂತೆ ನಗುತ್ತಾ, "ಇತ್ತು; ಒಂದು-ಎರಡು ಲಕ್ಷ"
ಆದರೆ ಅಮ್ಮ ಸೀರಿಯಸ್ ಆಗೇ ಇದ್ದಳು, "ಎಲ್ಲಿ ಹೋಗಿತ್ತು ನಿಂಗೆ ಬುದ್ಧಿ? ಸರಿಯಾಗಿ ಇಟ್ಟುಕೊಳ್ಳುವುದರ ಬಿಟ್ಟು?"
"ಆದದ್ದಾಯಿತಲ್ಲ ಅಮ್ಮಾ, ಮತ್ಯಾಕೆ ಅದು?"
"ಆದರೂ ಇರುವಷ್ಟು ದಿನ ಸರಿಯಾಗಿ ಇಟ್ಟುಕೊಂಡಿರಬೇಕು ತಾನೇ?"
        ಮಗನಿಗೆ ಕೋಪ ಎಲ್ಲಿತ್ತೋ... ಅಲ್ಲಿಯೇ ಇದ್ದ ತರಕಾರಿ ಬುಟ್ಟಿಯನ್ನ ಎತ್ತಿ ಅಮ್ಮನ ತಲೆಯಮೇಲೆ ಇಡುತ್ತಾ, "ಸರಿ ಹಾಗಿದ್ದರೆ, ಹೊತ್ತುಕೊಂಡೇ ಇರು, ಇರುವಷ್ಟು ದಿನ ಇಟ್ಟುಕೊಳ್ಳಬೇಕಷ್ಟೇ!?" ಎಂದ.
          ಅಮ್ಮ ಕಣ್ಣೀರು ಸುರಿಸುತ್ತಾ, ದೇವರ ಹತ್ತಿರ ಹೋಗಿ, "ಆಹಾ... ಎಂತಹ ಮಗನ್ನ ಕೊಟ್ಟಿರುವೆಯಪ್ಪಾ!?"ಎಂದು ಬೇಡಿಕೊಳ್ಳುತ್ತಿರುವಾಗ, ಮಗ ತಾನು ಮಾಡಿದ ಅವಿವೇಕಿ ಕೆಲಸ ನೆನಪಾಗಿ ಏನು ಮಾಡಲೂ ತೋಚದೇ ಅಳುವುದೋ... ಅಥವಾ ಮಂಕು ಮುಖಮಾಡಿಕೊಂಡು ಸುಮ್ಮನೇ ಕುಳಿತುಕೊಳ್ಳುವುದೋ, ಏನೊಂದೂ ತೋಚದೇ... ಸುಮ್ಮನೇ ನಗೆಯಾಡಿ ಸಂದರ್ಭವನ್ನ ತಿಳಿಮಾಡಲು ಪ್ರಯತ್ನಿಸುತ್ತಿದ್ದ!
                                                                       
*****
           
              ಇಷ್ಟೆಲ್ಲಾ ಪೀಠಿಕೆಯನ್ನ ಹಾಕುತ್ತಾ ಈಗ ಪ್ರಮುಖ ವಿಷಯಕ್ಕೆ ಬರೋಣ. ಇದು ಸಾಲಾಗಿ; ಅನುಕ್ರಮದಲ್ಲಿ ನಡೆದ ಘಟನೆಗಳಲ್ಲ. ಆ ಆ ಸಂದರ್ಭದಲ್ಲಿ, ವಯಸ್ಸಿನಲ್ಲಿ ನಡೆದ ಘಟನೆಗಳಿವು. ನೆನಪೆಂಬ ಪುಸ್ತಕವನ್ನ ಬಿಡಿಸುತ್ತಾ, ಮಗುಚಿದ ಕೆಲವೇ-ಕೆಲವು ಹಾಳೆಗಳ ನಡುವಿನ ಕೆಲವು ಸಾಲುಗಳನ್ನ ಇಲ್ಲಿ ಮಾತ್ರಾ ಬರೆದಿದ್ದೇನೆ. ಇಲ್ಲಿ ಮಗನ ಪಾತ್ರ ನನ್ನದೇ! ಅಮ್ಮನ ಪಾತ್ರ!!? ಅದನ್ನ ಮತ್ತೆ ಹೇಳಬೇಕೆ? ನನ್ನ ಮುದ್ದು ಅಮ್ಮನದ್ದಲ್ಲದೇ ಮತ್ತೆಯಾರದ್ದು ತಾನೇ ಆಗಿರಲು ಸಾಧ್ಯ?
ಇವತ್ತು ಬೆಳಗ್ಗೆ ಎದ್ದಾಕ್ಷಣ, ಈ ದಿನ ಟೀಚರ್ಸ್ ಡೇ ಎನ್ನುವುದು ನೆನಪಿಗೆ ಬಂತು. ಆ ಸಂದರ್ಭದಲ್ಲಿಯೇ ನನ್ನ ಅಮ್ಮನೂ ನನ್ನ ಎದುರು ಹಾದು ಹೋದಳು. ಆ ಕ್ಷಣ ಅಮ್ಮನಿಗೇ ’ಟೀಚರ್ಸ್ ಡೇ’ ಯ ಶುಭಾಶಯ ತಿಳಿಸಿದೆ. ’ಇವತ್ತು ಟೀಚರ್ಸ್ ಡೇ, ಅಂತದ್ರಲ್ಲಿ ನನಗ್ಯಾಪಕ್ಕಾ ಶುಭಾಶಯ’ ಅಂತ ಕೇಳಿದ್ದಕ್ಕೆ, ನನ್ನ ಬಾಯಲ್ಲಿ ಬಂದ ವಾಕ್ಯ, "ಮನೆಯೇ ಮೊದಲ ಪಾಠಶಾಲೆ..." ಮುಂದುವರಿಸಿದ್ದು ಅಮ್ಮನೇ, ನಗುತ್ತಾ.... "ಜನನಿ ತಾನೇ ಮೊದಲ ’ಗುರು’...." ಎಂಬ ಮಾತನ್ನ!!
          ಪ್ರಕೃತಿಯೇ ನಮಗೆ ಅತೀ ದೊಡ್ಡಗುರು ಎಂದು ಅರಿತವರು ಬಲ್ಲರು. ದೇವನು ಪ್ರತಿಯೊಬ್ಬ ವ್ಯಕ್ತಿಗೂ ತಾನೇ ಎದುರು ನಿಂತು ಕಲಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ, ಆ ಆ ಸಮಯದಲ್ಲಿ ಆತನು ಕಲಿಯ ಬೇಕಾದ ಜೀವನದ ಯಶಸ್ಸಿನ ಪಾಠಗಳನ್ನ ಅತೀ ಸೂಕ್ಷ್ಮವಾಗಿ ಪ್ರಕೃತಿಯಲ್ಲಿ ಅಡಗಿಸಿಟ್ಟು, ಆಯಾ ಸಂದರ್ಭದಲ್ಲಿ ಅದು ಹೊರಬರುವಂತೆ ಮಾಡುತ್ತಿರುತ್ತಾನೆ. ಅದನ್ನ ನಾವು ಅರ್ಥೈಸಿಕೊಳ್ಳಬೇಕಷ್ಟೇ. ಹೀಗೆ  ಅನೇಕ ಗುರುಗಳ ಮೂಲಕ ಸುಂದರ ಜೀವನವನ್ನ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ನನಗೆ ಅನೇಕ ಗುರುಗಳ ಸಮೂಹದಲ್ಲಿ ಮೊದಲ ಗುರುವಾಗಿ-ನನ್ನೊಟ್ಟಿಗೇ ಇರುವವಳು ನನ್ನ ಅಮ್ಮನೇ! ಅದಕ್ಕೇ ಮೊದಲ ಗುರುವಂದನೆ ನನ್ನ ಅಮ್ಮನಿಗೇ.
            ಮಕ್ಕಳು ದೊಡ್ಡವರಾದಂತೆ ಹೆತ್ತವರಿಗೆ ಅವರು ದೂರವಾಗುತ್ತಲೇ ಸಾಗುವ ಜಾಯಮಾನ ಈಗಿನ ಮಕ್ಕಳದು. ಮಾತು ಮಾತಿಗೆ, "ಅಪ್ಪಾ-ಅಮ್ಮಾ... ನನಗೆ ನೀವು ಏನು ಮಾಡಿದ್ದೀರಿ?" ಎನ್ನುವ ಪ್ರಶ್ನೆಯನ್ನ ಎದುರು ಮಂಡಿಸುತ್ತಾ ಅವರನ್ನ ನೋವಿಸುವುದೇ ಪರಿಪಾಠವಾಗಿದೆ. ’ಹೆತ್ತವರಿಗೆ ಹೆಗ್ಗಣವಾದರೂ ಮುದ್ದು’ ಎಂಬ ಮಾತು ಈಗ ಬದಲಾಗಿದ್ದು, ’ಹೆತ್ತವರಿಗೆ ಹೆಗ್ಗಣದ ಮದ್ದೇ’ ಎಂದರೆ ಅತಿಶಯೋಕ್ತಿಯಲ್ಲವೇನೋ!!
           ಹಿರಿಯರಾದ, ನನ್ನ ಗುರುಗಳೂ ಆದ, ಅಧ್ಯಾಪಕಾರಾಗಿಯೂ ಸೇವೆ ಸಲ್ಲಿಸುತ್ತಿರುವ ಶರ್ಮಕಾಕಾ ಹೇಳಿದ, ಹೆತ್ತವರ-ಮಕ್ಕಳ ಸಂಬಂಧದ ಬಗೆಗಿನ ಒಂದು ಘಟನೆ ಈ ಸಂದರ್ಭದಲ್ಲಿ ನೆನಪಾಗುತ್ತಿದೆ. 
        ಒಂದು ದಿನ, ಅವರ ಶಾಲೆಯಲ್ಲಿಯೇ ಓದುತಿದ್ದ ಹುಡುಗನೊಬ್ಬನ ತಂದೆತಾಯಿಗಳು ಇವರ ಬಳಿ ಬಂದು, ನಿಮ್ಮ ಶಾಲೆಯಲ್ಲಿ ಹಾಕಿಕೊಳ್ಳಲು ಸೂಚಿಸಿದ ಬೂಟಿನ ದರ ಬಲು ಹೆಚ್ಚಾದ್ದರಿಂದ, ಅದೇ ತರಹದ, ಇನ್ನೊಂದು ಕಂಪೆನಿಯ, ನಮ್ಮ ಅನುಕೂಲಕ್ಕೆ ತಕ್ಕ ಬೆಲೆಯ ಬೂಟನ್ನ ತರಿಸಿಕೊಟ್ಟರೆ; ನನ್ನ ಮಗ, "ನನಗೆ ಇದು ಬೇಡ, ಅದೇ ಬೇಕು!" ಎಂದು ಹಠ ಹಿಡಿದಾಗ. "ನಮ್ಮ ಹತ್ತಿರ ಅದನ್ನ ಕೊಡಿಸುವಷ್ಟು ಸಾಮರ್ಥ್ಯವಿಲ್ಲಪ್ಪ " ಎಂದು ದಯನೀಯವಾಗಿ ಹೇಳಿದಾಗ, ಮಗ ಹೇಳಿದ ಮಾತು ಕೇಳಿ, ಇವರಿಬ್ಬರೂ ದಂಗಾಗಿ ಕುಳಿತಿದ್ದುಬಿಟ್ಟರಂತೆ! ಅವನಾಡಿದ ಮಾತು, "ನನಗೆ ಬೂಟು ತಂದು ಕೊಡುವ ಸಾಮರ್ಥ್ಯ ನಿಮಗಿಲ್ಲಾ ಎಂದಾದರೆ, ನನ್ನನ್ನೇನು ನಿಮಗೆ ನಿದ್ದೆ ಬಂದಿಲ್ಲ ಎಂದು ಹುಟ್ಟಿಸಿದ್ದೋ?" ಎಂದು. "ಯಾವ ತಂದೆ-ತಾಯಿಗೆ ತಮ್ಮ ಮಗನಿಂದಲೇ ಇಂತಹ ಮಾತನ್ನ ಕೇಳುವುದಕ್ಕೆ ಸಾಧ್ಯ ಸಾರ್?" ಎನ್ನುತ್ತಾ ತಮ್ಮ ನೋವನ್ನ ತೋಡಿಕೊಂಡರಂತೆ. ಮತ್ತೂ ವಿಶೇಷದ ವಿಷಯವೇನಂದರೆ ಈ ಮಾತನಾಡಿದ್ದು ಕಾಲೇಜ್ ಹುಡುಗನಲ್ಲ. ಪ್ರೈಮರಿಯಲ್ಲಿ ಓದುತ್ತಿರುವ ಅತಿ ಚಿಕ್ಕ ವಯಸ್ಸಿನಲ್ಲಿಯೇ ಆಡಿದ ಮಾತು ಇದು!  
           ಈಗಿನ ಅತೀ ನೋವು ಕೊಡುವಂತಹ ವಾಸ್ತವ ಪರಿಸ್ಥಿತಿ ಇದು. ಆ ಹುಡುಗನ ಈ ಅತೀ-ಬುದ್ಧಿವಂತಿಕೆಗೆ ಯಾರನ್ನ ಹೊಣೆಯಾಗಿಸುವುದು? ಮಕ್ಕಳ ಉದ್ಧರಿಸುವ ಕಾರಣಗಳನ್ನ ಕೊಡುತ್ತಾ, ಈಗಿನ ಪೈಪೋಟಿತನವನ್ನೇ ಬಂಡವಾಳವಾಗಿರಿಸಿಕೊಂಡು ಹಗಲು ದರೋಡೆಗಿಳಿದಿರುವ ವಿದ್ಯಾದೇಗುಲಗಳನ್ನೋ? "ನಮಗೇನು ಇಲ್ಲಿ ಗಿಂಬಳಸಿಗುತ್ತೋ"ಎಂದು ಆಲೋಚಿಸುತ್ತಾ, ಸಂಬಳಕ್ಕೆ ತಕ್ಕಷ್ಟೇ ವಿದ್ಯೆಯನ್ನ ಕಲಿಸುವ ಗುರುವನ್ನೋ? ಸಲ್ಲದ ವಿಷಯವನ್ನ ಅತೀ ರಂಜಕವಾಗಿ ತೋರಿಸಿ ಮುಗ್ಧಮನಸ್ಸಿನೊಡನೆ ಆಟವಾಡುವ ಸಮಾಜದ ಮಾಧ್ಯಮಗಳನ್ನೋ? ಮುದ್ದು ಮನಸ್ಸಿನ, ಯಾವುದು ಕೆಟ್ಟದ್ದು, ಒಳ್ಳೇಯದು ಎಂದು ಗುರುತಿಸಲು ಸಾಧ್ಯವಾಗದೇ; ಕೆಟ್ಟದ್ದನ್ನೇ ಒಳ್ಳೆಯದೆಂದು ಭಾವಿಸಿ, ಅದನ್ನೇ ತಮ್ಮದಾಗಿಸಿಕೊಳ್ಳುವ ಮಕ್ಕಳನ್ನೋ? ಅಥವಾ ಮಕ್ಕಳು ಕೇಳಿ-ಕೇಳಿದ್ದನ್ನೆಲ್ಲಾ ಕೊಡಿಸಲು ಸಾಧ್ಯವಾಗದೇ, ಮಕ್ಕಳು ಹೇಳುವ ಕಠೋರ ನುಡಿಗಳನ್ನೆಲ್ಲಾ ಕೇಳುತ್ತಾ ಕೈ-ಚೆಲ್ಲಿ ಕುಳಿತುಕೊಳ್ಳುವ ಪಾಲಕರನ್ನೋ? ಇಲ್ಲಿ ಹೊಣೆಗಾರಿಕೆಯನ್ನ ತಮ್ಮಮೇಲೆ ಹಾಕಿಕೊಂಡು, ತಪ್ಪನ್ನ ತಿದ್ದಿಕೊಳ್ಳುವ-ತಿದ್ದುವ ಕೆಲಸವನ್ನ ಮಾಡುವವರೂ ಅತೀ ವಿರಳರೇ!
          ಏನೇ ಆಗಲಿ, ನನ್ನ ಅಮ್ಮ ಮಾತ್ರಾ ತನ್ನ ಜವಾಬ್ಧಾರಿಯನ್ನ ನನಗೆ ಚಾಚೂ ತಪ್ಪದೇ ಮಾಡಿಮುಗಿಸಿದ್ದಾಳೆ. ಮುದ್ದು ಮಾಡುವಲ್ಲಿ ಮುದ್ದುಮಾಡಿ, ಕಠೋರದ ಸಮಯದಲ್ಲಿ, ಹಟದಿಂದಲೇ ನನ್ನನ್ನ ಸರಿದಾರಿಯಲ್ಲಿ ನಡೆಸಿ-ಬೆಳೆಸಿದ್ದಾಳೆ. ಅಮ್ಮ ನನಗೆ ಏನೇನೋ ಕೊಡಿಸಿದ್ದಿಲ್ಲ! ಬದಲು ಬದುಕುವ ಪಾಠವನ್ನ ಪರಿ-ಪರಿಯಾಗಿ ಕೈ ಹಿಡಿದು ಕಲಿಸಿ, ನಡೆಸಿದ್ದಾಳೆ. ತನಗಿಲ್ಲದಿದ್ದರೂ, ತನಗೆಂದು ಕೊಟ್ಟಿದ್ದನ್ನ ಮಗನಿಗೆಂದು ತೆಗೆದಿರಿಸಿ ನನ್ನ ದಿನಗಳ ಹಸಿವನ್ನ ಇಂಗಿಸಿದ್ದಾಳೆ. ಸಮಯದಲ್ಲಿ ತಿಳಿಹೇಳಿ ನೋವನ್ನ ಮರೆಸಿದ್ದಾಳೆ. ಕಷ್ಟವನ್ನ ಸಹಿಸುವುದನ್ನು ಕಲಿಸಿದ್ದಾಳೆ. ಸಂಬಂಧಗಳನ್ನ ಪ್ರೀತಿಸುವುದನ್ನ-ಗೌರವಿಸುವುದನ್ನ ನನಗೇ ಧಾರೆಯೆರೆದಿದ್ದಾಳೆ. ನನ್ನ ಸುಖೀ ಜೀವನಕ್ಕೆ ತಕ್ಕ ವಾತಾವರಣವನ್ನ ಕಲ್ಪಿಸಿಕೊಟ್ಟಿದ್ದಾಳೆ. ನನಗೆ ಮತ್ತೇನು ತಾನೇ ಬೇಕು?
          ಆದರೆ, "ಅದೇ ಮಗ ಇಂದು ದೊಡ್ಡವನಾಗಿದ್ದಾನೆ! ಅದೇ ಅಮ್ಮನ ಪ್ರೀತಿ ಇಂದು ಅತೀ ಅನ್ನಿಸುತ್ತಿದೆ!! ನನಗೆ ಎಲ್ಲವೂ ತಿಳಿದಿದೆ ಎನ್ನುವ ಅಹಂ ಅವನ ಮನಸ್ಸಿನಲ್ಲಿ ಮನೆಮಾಡಿ, ಮತ್ತೆ-ಮತ್ತೆ ಅವಳಿಗೆ ಕಠೋರ ಮಾತುಗಳನ್ನಾಡಿ ನೋವಿಸುತ್ತಿರುತ್ತಾನೆ! ಅಮ್ಮಾ... ನಿನ್ನ ಮಗ ಹೇಗೆಂಬುದು ನಿನಗೇ ಗೊತ್ತಲ್ಲಾ... ಹಾಗೇ ಮಾಡಿದ್ದಾಗಲೆಲ್ಲಾ ಕ್ಷಮಿಸಿಬಿಡಮ್ಮಾ... ನೀನೇ ತಾನೇ ನನ್ನ ಮೊದಲ ಗುರು. ಗುರುವಾದವನು ತನ್ನ ಶಿಷ್ಯನ ತಪ್ಪುಗಳನ್ನೆಲ್ಲಾ ತಿದ್ದಿ-ತೀಡಿ ಸನ್ಮಾರ್ಗದಲ್ಲಿ ನಡೆಸುತ್ತಾನೆ. ಅದರಲ್ಲೂ ನೀನೇ ನನಗೆ; ಅಮ್ಮನೊಟ್ಟಿಗೆ-ಗುರುವಾಗಿಯೂ ನನ್ನನ್ನ ನಡೆಸುತ್ತಿದ್ದೀ. ನಿನಗೆ ಎಷ್ಟು ಧನ್ಯವಾದಗಳನ್ನ ಅರ್ಪಿಸಲೋ ನಾನರಿಯಲಾರೆ. ಮತ್ತೊಮ್ಮೆ ನಿನಗೇ ನಾನು ಮೊದಲು... ಶಿಕ್ಷಕರ ದಿನಾಚರಣೆಗೆ ಶುಭಾಶಯವನ್ನ ಹೇಳುತ್ತಿದ್ದೇನೆ.
"ಹ್ಯಾಪೀ ಟೀಚರ್ಸ್ ಡೇ... ಅಮ್ಮಾ..."
          ನನ್ನ ಈಗಿನ ಉತ್ತಮ ಪರಿಸ್ಥಿತಿಗೆ ಕಾರಣೀ ಭೂತರಾಗಿರುವ- ಆಗುತ್ತಲೂ ಇರುವ ಎಲ್ಲಾ ಗುರುವಿನ ಸಮೂಹಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯವನ್ನ ತಿಳಿಸುತ್ತಿರುವೆ.


ನನ್ನ ಅಮ್ಮ.


ಸೋಮವಾರ, ಜುಲೈ 9, 2012

ಕಥೆ:ಹರೀಶನ ಪ್ರೇಮ ಪ್ರಸಂಗ


ನೀನು ಫೇಕ್…”
ನಾನು ಫೇಕ್ ಅಲ್ಲಾ..!
ಹೌದು... ನೀನು ಫೇಕೇ..!!
ನಾನು ಫೇಕ್ ಅಲ್ಲಾ... ಅಲ್ಲಾ...
"ನೀನು ಫೇಕ್ ಅಲ್ಲಾ ಅನ್ನಲಿಕ್ಕೆ ಸಾಕ್ಷಿ ಏನಿದೆ??”
ನಿನಗೆ ಸಾಕ್ಷಿ.... ಬೇಕಾ? ... ಸಾಕ್ಷಿ??” ಎನ್ನುತ್ತಲೇ ಆಕಾರವು, ಹಲ್ಲುಕಿರಿದು, ಕೋರೆ ದಾಡೆಗಳನ್ನೊಮ್ಮೆ ಝಳಪಿಸಿ, ತನ್ನ ನಾಲಿಗೆಯನ್ನು ಹೊರಚಾಚಿ, ಒರಟು ಒಣದುಟಿಯ ಮೇಲೆ ಚಪ್ಪರಿಸಿ, ಒಮ್ಮಿಂದೊಮ್ಮೆಲೇ ತನ್ನ ಕಡೆಗೆ ಹಾರಿದ್ದು ನೋಡಿ, ಹೌಹಾರಿದ ಹರೀಶ!!
  ಠಕ್ಕಂತ ಎದ್ದು ಕುಳಿತ.
ಒಂದು ಕ್ಷಣದ ಕಾಲ ತಾನು ಎಲ್ಲಿರುವನೆಂದೇ ಅವನಿಗೆ ತಿಳಿಯಲಿಲ್ಲ. ಮೈಯೆಲ್ಲಾ ಬೆವರಿನಿಂದ ತೋಯ್ದಿತ್ತು. ತಾನು ಎಲ್ಲಿಗೋ ಓಡಲು ಪ್ರಯತ್ನಿಸಿರುವುದೂ, ಕೈ-ಕಾಲುಗಳು ತುಸು ನಡುಗುತ್ತಿರುವುದೂ- ಅವನ ಅನುಭವಕ್ಕೆ ಬಾರದೇ ಇರಲಿಲ್ಲ!
ಒಂದೆರಡು ನಿಮಿಷ ತನ್ನ ತಾನು ಸಮಾಧಾನ ಮಾಡಿಕೊಂಡು ವಾಸ್ತವಕ್ಕೆ ಬರಲು ಪ್ರಯತ್ನಿಸಿ,
   ಆಗ ತಾನೇ ಕಂಡ ಆಕಾರ ಈಗೆಲ್ಲಿ ಹೋಯಿತು?’ ಎಂದುಕೊಳ್ಳುತ್ತಲೊಮ್ಮೆ ಸುತ್ತಲೂ ನೋಡಿ, ಎಲ್ಲಿಯೂ ಕಾಣದಿರುವುದನ್ನ ನೋಡಿ, ನಿಟ್ಟುಸಿರೊಂದ ಬಿಟ್ಟು, ಮತ್ತೆ ತನ್ನ ಹಾಸಿಗೆಯ ಮೇಲೆ ಮೈಚಾಚಿ ಮಲಗಿದ.
ಮತ್ತೆ ಕಣ್ಣುಮುಚ್ಚಲು ಪ್ರಯತ್ನಿಸಿದರೆ, ಆ ಆಕಾರವೇ ಧುತ್ತೆಂದು... ಎದುರಿಗೆ ಬಂದದ್ದನ್ನ ನೋಡಿ, ಕಣ್ಣನ್ನ ಹಾಗೆಯೇ ಬಿಟ್ಟು ಅದರ ಬಗ್ಗೆಯೇ ಚಿಂತಿಸತೊಡಗಿದ.
ಈಗ ಕಂಡಿದ್ದು ವಾಸ್ತವವೇ? ಅಥವಾ ವಾಸ್ತವದಂತಿರುವ ಕನಸೇ? ಹೀಗೆ ಕಾಣಲಿಕ್ಕಾದರೂ ಕಾರಣ ಏನಿರಬಹುದು? ಅಂತಹ ಆಕಾರವನ್ನ ನಾನೆಂದೂ ನೋಡಿದ್ದಿಲ್ಲ! ಯೋಚಿಸಿದ್ದಿಲ್ಲ! ಭಯಂಕರ ಛಾಯಾರೂಪದಲ್ಲಿ ತನ್ನೆದುರಿಗೆ ನಿಂತು ವಾದಮಾಡಿ, ಕೊನೆಗೊಮ್ಮೆ ತನ್ನನ್ನೇ ಆಕ್ರಮಿಸ ಹೊರಟ ಅದನ್ನ ನೆನಸಿಕೊಂಡರೆನೇಯೇ ಮೈಮೇಲೆ ಹಾವು ಹರಿವ ಅನುಭವ ಆಗುತ್ತೆ!! ಅದು ಈ ರೀತಿಯಾಗಿ ಕಾಣಲಿಕ್ಕೆ ಕಾರಣವೇನಿರಬಹುದು??” ಎಂದುಕೊಳ್ಳುತ್ತಲೇ ತಾನು ಅಡ್ಮಿನ್ ಆಗಿ ನಿರ್ವಹಿಸುತ್ತಿರುವ ಫೇಸ್ ಬುಕ್ನ ಒಂದು ಗ್ರುಪ್ ನಲ್ಲಿ ಹುಡುಗಿಯರದೇ ಎಂದು ಭಾಸವಾಗುವ- ಫೇಕ್ಪ್ರೊಫೈಲ್ ಗಳ ಹಾವಳಿಯನ್ನ ನಿಯತ್ರಿಸಲು ಹಾಗೇ ಅನುಮಾನ ಬಂದವರನ್ನೆಲ್ಲಾ ವಿಚಾರಿಸುವುದ ನೆನಪಾಗಿ,
"ಬಹುಶಃ ಹೀಗೂ ಆಗಿದ್ದಾಗಿರಬೇಕು- ತಾನು ಕಂಡುಹಿಡಿದ ಫೇಕ್ ಪ್ರೊಫೈಲ್ ಮಂದಿಯೆಲ್ಲಾ ತಮ್ಮ, ತಮ್ಮ ಕಮರಿಹೋದ ಕನಸುಗಳ ಸೇಡು ತೀರಿಸಿಕೊಳ್ಳಲು, ತನ್ನ ಮೇಲೆ ಕತ್ತಿಮಸೆಯ ಇಂತಹ ಆಕಾರವನ್ನ ಸೃಷ್ಟಿಸಿ ಕಳುಹಿಸಿರಬಹುದೇ? ಅಥವಾ ಅಂತಹ ಫೇಕ್ ಅಂತೇ ತೋರುವಲ್ಲಿಯೂ ಸರಿಯಾದದ್ದೂ ಇದ್ದು... ಅವರೆಲ್ಲರ ನಿರಾಸೆಯ ಆತ್ಮ ಬುಸುಗುಟ್ಟಿ, ತನ್ನಮೇಲೇರಿ ಬಂದಿರಬಹುದೇ??”
ಎನ್ನುವ ನೂರಾರು ಚಿಂತೆಗಳು ಅವನ ಮೇಲೆ ಒಂದರ ಮೇಲೊಂದು ಸವಾರಿಯನ್ನ ಮಾಡುತ್ತಿದ್ದಂತೆ ಅಲರಾಮ್ ಕಿರ್ರ್.....ಎಂದು ಕೂಗತೊಡಗಿದ್ದನ್ನ ಮತ್ತೆ ಅವನನ್ನ ಬೆಚ್ಚಿಬೀಳಿಸಿತು!
ಆ ಭಯಂಕರ ಆಕೃತಿ ಅಲರಾಮ್ ನಲ್ಲೆಂದು ಸೇರಿಕೊಂಡಿತಪ್ಪಾ?’ ಎಂದುಕೊಳ್ಳುತ್ತಾ. ಅದನ್ನ ನೋಡಿದಾಗ ಅಲ್ಲಿ ೫.೧೫ ಆಗಿರುವುದನ್ನ ನೋಡಿ, ಈದಿನ ಸ್ನೇಹಿತರೊಂದಿಗೆ ಹೋಗಬೇಕಿದ್ದ ಸೋಮನಾಥಪುರ ಟ್ರಿಪ್ಪಿಗೆ, ಹೋಗಲನುಗುಣವಾಗುವಂತೆ ಬೇಗನೆ ಏಳಲು ಸೆಟ್ ಮಾಡಿಟ್ಟುಕೊಂಡಿದ್ದು ನೆನಪಾಗಿ ಎದ್ದು ಕುಳಿತು, ಲಗುಬಗೆಯಿಂದ ಅದನ್ನ ಆಫ್ ಮಾಡಿ ಬಾತ್ರೂಂ ಕಡೆ ಹೆಜ್ಜೆ ಹಾಕಿದ.
ಷವರ್ ತಿರುಗಿಸಿ ಅದರ ಕೆಳನಿಂತ ತಕ್ಷಣ, ತಂಪಾದ ನೀರು ತಲೆಯ ಮೇಲೆ ಬಿದ್ದು ಕೆಳಹರಿಯುತ್ತಿದ್ದಂತೆ ದೇಹಕ್ಕೂ, ಮನಸ್ಸಿಗೂ ಹಾಯ್ ಎನಿಸಿತ್ತು ಅವನಿಗೆ.
ಎಲ್ಲಾ ಮರೆತು ಆ ಸಮಯವ ಉಲ್ಲಾಸದಿಂದಲೇ ಅನುಭವಿಸಿ- ಗಂಗೆಯಲ್ಲಿ ಮುಳುಗಿ ಸಕಲ ಪಾಪವ ಪರಿಹರಿಸಿಕೊಳ್ಳುವಂತೆ; ಹರೀಶ ಷವರ್ ನ ಕೆಳನಿಂತು ಭಯಂಕರಾಕೃತಿಯ ಭಾರದಿಂದ ಮುಕ್ತನಾಗಿ, ಫ್ರೆಶ್ ಆಗಿ ಹೊರಬಂದು, ಬೇಗ ಬೇಗನೆ ರೆಡಿಯಾಗಿ ಬೈಕ್ ಚಾಲೂ ಮಾಡಿ, ತನ್ನ ಪಿಕ್-ಅಪ್ ಪೈಂಟ್ ಗಿರಿನಗರದ ಕಡೆ ಮುಖಮಾಡಿದ.
                                                     **********
ಗಾಡಿ ಬಂದು ಗಿರಿನಗರದ ರಾಧಾಕೃಷ್ಣ ಹಾಸ್ಪಿಟಲ್ ನ ಎದುರಾಗಿ ಅವನಿಗೆ ಕಾಯುತಿತ್ತು. ಸ್ನೇಹಿತರೊಡಗೂಡಿ ಗಾಡಿ ಏರಿದ್ದೂ ಆಯಿತು.
ಒಬ್ಬರಿಗೊಬ್ಬರ ಉಭಯಕುಶಲೋಪರಿಯಲ್ಲಿ ಹರಿ ಖುಷಿ-ಖುಷಿಯಿಂದಲೇ ಭಾಗವಹಿಸಿದ.
ಗಾಡಿಯ ತುಂಬೆಲ್ಲಾ ಕೆಲವೇ ಸಮಯದಲ್ಲಿ ಖುಷಿಯ ಖೇಕೆಗಳೂ ತುಂಬಿದವು. ಅವನ ನಗುಮೊಗ ಎಲ್ಲರನ್ನೂ ವಿಶೇಷವಾಗಿ ಉತ್ಸಾಹಿಸುವಂತಿತ್ತು.
ಒಬ್ಬರನ್ನೊಬ್ಬರ ಕಾಲೆಳೆದುಕೊಳ್ಳುವುದೂ, ಚುಡಾಯಿಸುವುದೂ, ಜೋಕ್ ಕಟ್ ಮಾಡಿ ನಗುವುದೂ ಗಾಡಿಯನ್ನ ಬೇಗನೇ ಬೆಂಗಳೂರನ್ನು ದಾಟಿಸಿತು.
ರಸ್ತೆಯಂಚಿನ ಹೋಟೆಲ್ ನಲ್ಲಿ ಹಸಿವಿನಿಂದ ಚುರ್ ಗುಟ್ಟುತ್ತಿರುವ ಹೊಟ್ಟೆಗೆ ಉಪಹಾರದ ಸೇವನೇಯೂ ಸಾಂಗವಾಗಿ ನಡೆದು, ಎಲ್ಲರನ್ನೂ ಮತ್ತೂ ಉತ್ಸಾಹಿತರನ್ನಾಗಿ ಮಾಡಿತು.
ಈಗ ಎಲ್ಲರ ಕಣ್ಣೂ, ಕಿವಿಗಳೆಲ್ಲವೂ ಉತ್ಸಾಹದಿಂದ, ಹಿರಿತಲೆ ಪೂರ್ಣಿಮಾಳಲ್ಲಿ ತುಂಬಿಕೊಳ್ಳುವಂತೆ ಮಾಡಿದ್ದು- ಅವಳು ಹೇಳಿದ ತನ್ನ ಪ್ರೇಮ-ಮದುವೆ ಕಥೆಯಿಂದ!!
ಇದು ಹರೀಶನಿಗೆ ತುಂಬಾನೇ ಎಕ್ಸೈಟಿಂಗ್ ವಿಷಯವಾಗಿತ್ತೋ, ಏನೋ? ಬಿಟ್ಟಕಣ್ಣು ಬಿಟ್ಟಹಾಗೇ, ತೆರೆದ ಬಾಯ ಮುಚ್ಚದೇ ಕೇಳಿದ್ದು ಸುಳ್ಳಲ್ಲ!
ಪೂರ್ಣಿಮಾ ಹೇಳುತ್ತಿದ್ದಳು, “ಅವರನ್ನ ನಾ ಯಾವ ಕ್ಷಣದಲ್ಲಿ ನೋಡಿದೆನೋ ಅಂದೇ ಮನಸ್ಸಿನಲ್ಲಿಯೇ ನನ್ನ ಆರಾಧ್ಯ ದೈವರಾಗಿ ಬಿಟ್ಟರು. ಇವರು ನನ್ನವರೇ ಎಂದು ಮನಸ್ಸಿನಲ್ಲಿ ಅನ್ನಿಸಿಬಿಟ್ಟಿತು. ಅವರಿಗೂ ಹಾಗೆಯೇ ಅನ್ನಿಸಿದ್ದು ನನ್ನ ಭಾಗ್ಯಕ್ಕೆ ಎಡೆಯಿಲ್ಲದಂತಾಯಿತು. ಇನ್ನೇನು ತಡ! ತನ್ನ ಮನೆಯವರ ಪುಟ್ಟ ವಿರೋಧದಲ್ಲಿಯೇ ಮದುವೆಯೂ ಆಗಿಹೋಯಿತು. ಈಗ ನನಗೆ ಎರಡು ಮಕ್ಕಳು!!ಎಂದು ನಗುಮೊಗದಲ್ಲೇ ಹೇಳಿದ್ದು ಅವಳು ಎಷ್ಟು ಸಂತೋಷದಿಂದ ಇರುವಳು ಎನ್ನುವುದು ತೋರುತಿತ್ತು.
ಇದು ಹರಿಗೆ ಆಶ್ಚರ್ಯತರುವಂತ ವಿಚಾರವಾಗಿತ್ತು. ಪ್ರೇಮದ ಬಗ್ಗೆ ಓದಿ, ಉಳಿದವರು ಹೇಳಿದ್ದ ಕೇಳಿದ್ದಷ್ಟೇ ತಿಳಿದಿತ್ತು! ಆದರೆ ಅವುಗಳಲ್ಲೆಲ್ಲಾ ಪ್ಯಾಂಟಸಿಗಳೇ ಹೆಚ್ಚಿದ್ದರಿಂದ ಅವನನ್ನ ಅದರ ಬಗ್ಗೆ ಅಷ್ಟೇನೂ ಉತ್ಸಾಹಿಸುವಂತೆ ಮಾಡಿರಲಿಲ್ಲ! ಆದರೆ ಇಷ್ಟು ಹತ್ತಿರದಿಂದ ಕೇಳಿದ ಈ ಕಥೆ, ಅವನ ಮನದಲ್ಲಿ ಗೂಡುಕಟ್ಟ ತೊಡಗಿತು!!
  ನೋಡಿದ ತಕ್ಷಣವೇ ಲವ್ವೇ?? ಇದು ಹೇಗೆ ಸಾಧ್ಯ?
ನನ್ನ ಪರಿಧಿಯಲ್ಲೇ ಕೇಳಿದ ಅತಿಸೊಗಸಾದ ಕಥೆ ಇದು. ಅಲ್ಲದೇ ವಾಸ್ತವವೂ ಹೌದು, ಕಲ್ಪನೆಯಂತೂ ಅಲ್ಲವೇ ಅಲ್ಲಾ! ಮತ್ತಲ್ಲದೇ; ಸಾಕ್ಷಿಗೆ ನಗುಮೊಗದ ಈ ಅಕ್ಕನೇ ಇದ್ದಾಳೆ!!
ಆದರೂ....
ನಾನು ಇಷ್ಟರವರೆಗೆ ಎಷ್ಟು ಹುಡುಗಿಯರನ್ನ ನೋಡಿಲ್ಲ! ಯಾರ ಮೇಲೂ ಅಂತ ಭಾವನೆಯೇ ಹುಟ್ಟಿಲ್ಲವಲ್ಲ!
ಇವಳು ಹೇಳುತ್ತಿರುವುದ ನೋಡುತ್ತಿರೆ, ಪ್ರೇಮದಲ್ಲಿ ಅಂತ ಸೊಗಸಿದೆಯಂತಾಯಿತು! ಅಂತ ಸೊಗಸು ನನಗ್ಯಾಕೆ ಸೋಗು ಹಾಕಿ ಕುಳಿತಿದೆ?
ಅಂತ ನಯ-ನಾಜೂಕು ಅವರಲ್ಲಿ ಕಾಣಲು ಯಾಕೆ ನನ್ನ ಮನ ಮಾಯವಾಗಿದೆ?
ಅವರ ಮಾಟವ ನೋಡುವುದ ಬಿಟ್ಟು! ನನ್ನ ಬುದ್ಧಿಯಾಕೆ ಮಾಟ-ಮಂತ್ರಿಸಿದಂತೆ ಭ್ರಮಾನಿರಸನವಾಗಿದೆ?
ಅವರಲ್ಲಿರುವ ಯಾವ ಸೌಂದರ್ಯದ ಸೊಭಗೂ ನನ್ನ ಚಿತ್ತವನ್ನ ಚಿತ್ತು ಮಾಡುವುದರಲ್ಲಿ ಯಾಕೆ ಸೋತುಹೋಗಿದೆ? ಅಲ್ಲದೇ, ಪ್ರೇಮಿಸುವ ವಯಸ್ಸೂ ನನ್ನದಲ್ಲವೇ!?
ಪ್ರೇಮ ಹುಟ್ಟಲು ವಯಸ್ಸಿನ ಅಗತ್ಯವೇ ಇಲ್ಲವೆಂದು ಎಲ್ಲೋ ಓದಿದ ನೆನಪಿದೆ! ಆದರೂ..ಯಾವ ಕಾರಣಕ್ಕೆ ಸನ್ಯಾಸಿಯ ಪೇಟ ನನ್ನ ತಲೆಮೇಲೆ ಬಂದು ಕುಳಿತಿರಹಬುದು?
ನನ್ನ ಕಣ್ಣಿನ ಕನ್ನಡಕವೇನಾದರೂ ಅಂತಹ ಸೂಕ್ಷ್ಮ ಸಂವೇದನೆಯನ್ನುಂಟು ಮಾಡಿ, ನನ್ನ ಕಣ್ಣಿನವರೆಗೆ ಪ್ರೇಮದ ಭಾವನೆಯನ್ನು ತರಲು ಸೋಲುತ್ತಿದಿಯೇ??” ಎಂದುಕೊಳ್ಳುತ್ತ ಕನ್ನಡಕವನ್ನೊಮ್ಮೆ ತೆಗೆದು, ಒರೆಸಿ-ಧರಿಸಿದ.
ಇಲ್ಲಾ ಇಲ್ಲಾ... ಅದಾಗಿರಲು ಸಾಧ್ಯವಿಲ್ಲ!! ಆ ಆ ವಯಸ್ಸಿಗನುಗುಣವಾಗಿಯೇ ಪದೇ ಪದೇ ಚೆಕ್ ಮಾಡಿಸುತ್ತ, ದರ್ಪಣವ ಬದಲಿಸುತ್ತಲೇ ಇರುವೆ!!
   ಬಹುಶಃ ಈ ಒಂದು ಕಾರಣಕ್ಕಿರಬಹುದು.......
 ಹುಡುಗಿಯರ ಹೆಸರಿನ ಫೇಕ್ ಪ್ರೋಫೈಲ್  ನೋಡಿ-ನೋಡಿ ಹುಡುಗಿಯರೇ ಫೇಕ್.... ಎನ್ನುವ ಭಾವನೆ ನನಗೆ ಪ್ರಬಲವಾಗಿ ಬಿಟ್ಟಿದೆ ಅನಿಸುತ್ತಿದೆ!?”
 ಎಂದು, ಒಂದೊಂದೇ ಯೋಚನೆಯ ಕಡ್ಡಿಯಿಂದ ಪ್ರೇಮಕ್ಕೆ ಗೂಡು ಕಟ್ಟಲು ಪ್ರಯತ್ನಿಸುತ್ತಿದ್ದಂತೆ, ಧುತ್ತನೆ ನೆನಪಾದ ಫೇಕ್.... ಭೂತ ಬೆಳಗ್ಗೆಯಷ್ಟೇ ಕಾಡಿದ್ದು ಮತ್ತೆ ನೆನಪಾಗಿ, ಮನದಲ್ಲೇ ಕಟ್ಟುತ್ತಿರುವ ಪ್ರೇಮದ ಗೂಡನ್ನು ಕಿತ್ತುಹಾಕಲು ಧಾವಿಸುತ್ತಿರುವಂತೆ, ಮೈಯೆಲ್ಲಾ ಇನ್ನೇನು ಬೆವರಲು ಪ್ರಾರಂಭವಾಗುತ್ತದೆ, ಎನ್ನುತ್ತಿರಲಾಗಿ....
ಹುಂಭಾ.... ಹರೇ ಹುಂಭಾ..... ಹರೇ ಹರೇ ಹುಂಭಾಎಂದು ಜೋರಾಗಿ ಸ್ನೇಹಿತರೆಲ್ಲರೂ ತನ್ನನ್ನ ಅಣಕಿಸಿ ಕೂಗುತ್ತಿರುವುದಕ್ಕೆ ತಟ್ಟನೇ ಎಚ್ಚರಾಗಿ, ಗಾಬರಿಯಿಂದ ಹೊರಬಂದು, ಅರ್ಜುನ ಸನ್ಯಾಸಿಯ  ನಸು ನಗುವನ್ನ ನಟಿಸುತ್ತಾ, ಎಲ್ಲರೊಟ್ಟಿಗೇ ತಾನೂ ಕೂಗತೊಡಗಿ,
ಮನಸ್ಸಿನಲ್ಲೇ ಅಬ್ಬಾ....ಎಂದುಕೊಳ್ಳುತ್ತಾ ಅಲ್ಲೇ ನಿಟ್ಟುಸಿರೂ ಬಿಟ್ಟಿದ್ದೂ, ಕೂಗಿ-ಕಬ್ಬರಿಯುತ್ತಿರುವ ಯಾರಿಗೂ ಗೊತ್ತೇ ಆಗಲಿಲ್ಲ!!
ಗುರಿಯಿಲ್ಲದ್ದು ಕಾಲ, ಸೋಮನಾಥ ಪುರಕ್ಕೆ ಹೋಗುತ್ತಿರುವ ಗಾಡಿಗೆ ಹಾಗಾಗುತ್ತದೆಯೇ? ಪುರಕ್ಕೆ ಬಂದು, ಪಾರ್ಕಿಂಗ್ ಸ್ಫಾಟ್ ನೋಡಿ, ಗಾಡಿ ನಿಂತಿದ್ದೂ ಆಯಿತು.
ಎಲ್ಲರೂ ಇಳಿದು ಸೋಮನ ಗುಡಿಯಕಡೆ ತೆರಳತೊಡಗಿದರು.
ಹರಿಯೂ ಕೂಡ, ತನ್ನ ಕ್ಯಾಮರಾವ ಕುತ್ತಿಗೆಗೆ ತೂಗಿಸಿ, ಪ್ರವೇಶಕ್ಕೆ ನಿಗಧಿ ಪಡಿಸಿದ ಟಿಕೆಟ್ ಕೊಂಡು, ದೇವಾಲಯವನ್ನ ಪ್ರವೇಶಿಸಿದ.
ಆಗಲೇ ಅಲ್ಲಿಗೆ ಹಲವು ಕಡೆಯಿಂದ ಬಂದ ಜನ- ಕಲ್ಲಿನಲ್ಲೇ ನಿರ್ಮಿಸಿದ ಕಲಾಕೃತಿಯ
 ಸೊಬಗನ್ನ ತುಂಬು ಕಣ್ಣುಗಳಿಂದ ಆನಂದಿಸುತ್ತಿದ್ದರಲ್ಲದೇ, ಹೊತ್ತ ಕ್ಯಾಮರಾಗಳಲ್ಲೂ ತುಂಬಿಸಿಕೊಳ್ಳುತ್ತಿದ್ದರು. ಭಾವಗಳನ್ನೇ ಶಿಲೆಗಳಲ್ಲಿ ನಿಲ್ಲಿಸಿದಂತಿತ್ತು! ಸೂಕ್ಷ್ಮಾತಿ ಸೂಕ್ಷ್ಮಗಳನ್ನೂ ಅತಿ ಸುಂದರವಾಗಿ ತೋರಿಸಿದ್ದರು ಶಿಲ್ಪಗಳಲ್ಲಿ.
ಹರಿಯು ತಾನೂ ಎಲ್ಲರೊಟ್ಟಿಗೂ ಸೇರಿ ತನ್ನ ಕ್ಯಾಮರಾಕ್ಕೆ ಕೆಲಸ ಕೊಡತೊಡಗಿದ.
ನಾನಾ ವಿಧಗಳ ಕಲಾನೈಪುಣ್ಯಳಿಂದ ಬೆರಗುಗೊಳಿಸುವ ಕೆತ್ತನೆಗಳು, ತಮ್ಮ ಚಿತ್ರ-ವಿಚಿತ್ರ ಭಾವ ಭಂಗಿಗಳಿಂದ ಹೆಚ್ಚು-ಹೆಚ್ಚು ಫೋಟೋಗಳನ್ನ ಕ್ಲಿಕ್ಕಿಸಿಕೊಳ್ಳುತ್ತಿದ್ದರೆ, ಜೊತೆಗೆ ಬಂದ ಹರಿಯ ಸ್ನೇಹಿತರೂ ಆ ಶಿಲ್ಪಗಳಜೊತೆ ತಾವೂ ನಿಂತು, ಅವನನ್ನ ತಮ್ಮ ಫೋಟೋತೆಗೆಯಲು ಪೀಡಿಸುತ್ತಿದ್ದರು. ಅವರುಗಳ ಒತ್ತಾಯವನ್ನೂ ಪೀಡನೆಯೆಂದು ತಿಳಿಯದೇ ನಗು-ನಗುತ್ತಲೇ ಎಲ್ಲರೂಗಳನ್ನೂ ವಿವಿಧ ಪೋಸುಗಳಲ್ಲಿ ನಿಲ್ಲಿಸಿ ಫೋಟೋಗಳನ್ನು ತೆಗೆಯತೊಡಗಿದ ವಿಶಾಲಮನಸ್ಸಿನ ಹರೀ. ಹಾಗೇ ಒಂದೇಸವನೇ ಎದುರಿಗೆ ನಿಂತಿರುವವರನ್ನ ಕ್ಲಿಕ್ಕಿಸುವ ಸಮಯದಲ್ಲೇ, ಆನ್ ಮಾಡಿಕೊಂಡಿದ್ದ ಪ್ಲ್ಯಾಶ್, ಪಕ್ಕದಲ್ಲೇ ನಡೆದು ಹೋಗುತ್ತಿರುವ  ಆಕೃತಿಯಮೇಲೆ ಬಿದ್ದು ಪ್ರತಿಫಲಿಸಿ, ತನ್ನ ಹೃದಯವನ್ನೂ ಪ್ಲ್ಯಾಶ್ ಆಗುವಂತೆ ಮಾಡಿದ್ದರ ಬಗ್ಗೆ ಅಶ್ಟುಗಮನ ಕೊಡಲಾಗಲೇ ಇಲ್ಲ ಅವನಿಗೆ!!
ಎಲ್ಲಾ ಸ್ನೇಹಿತರನ್ನೂ ಮುಂದೆ ಕಳುಹಿಸಿ ದೇವಸ್ಥಾನದ ಹೊರವಲಯದ ಪ್ರಾಂಗಣವನ್ನ ಸುತ್ತಿಬಳಸಿ ಬರುತ್ತಿರುವಾಗ್ಗೆ ಹರಿಗೆ ಮತ್ತೆ ಅದೇ ಕಣ್ಣಿಗೆ ಬಿದ್ದಿತು.
ಇಂತದ್ದು ಆಗಲೇ ಬೇಕೆಂದಿದ್ದರೆ, ಅದು ಆಗಿ ತೀರುವುದೇ ಕಾಲದ ನಿಯಮವಲ್ಲವೇ? ಹರಿ-ಹರ-ಬ್ರಹ್ಮನಿಗೆ ಬಿಟ್ಟದ್ದು ಈ ಪ್ರೇಮದ ವಿಷಯದಲ್ಲಿ ಹುಂಭನೆಂದಾಕ್ಷಣ ಹರಿಗೆ ಬಿಟ್ಟಾನೆಯೇ ಕಾಲ!? ಯಾವ ಕಾಲದಲ್ಲಿ ಏನಾಗಬೇಕಿತ್ತೋ? ಅದೂ ಆಗಿಯೇ ಬಿಟ್ಟಿತು ಸೋಮನಗುಡಿಯಲ್ಲಿ!  
ಕರಿಯ ಶಿಲ್ಪಗಳಲ್ಲಿ ತುಂಬಿದ ಸೊಗಸು, ಇಲ್ಲಿ- ಹೇಗೆ, ಈ ಬಿಳಿಗೊಂಬೆಯಲಿ ಆಕರ್ಷಿಸಲ್ಪಟ್ಟವು ಎನ್ನುವುದೇ ಆಶ್ಚರ್ಯಕರವಾಗಿದ್ದು, ಅವನ ಕಣ್ಣುಗಳು ಎರಡಂಗುಲ ಅಗಲವಾದವು! ಮೊದಲು ನೋಡಿದಾಗೊಮ್ಮೆ- ತಾನು ನೋಡುತ್ತಿದ್ದ ಶಿಲ್ಪಗಳೇ ಅಮೃತದ ಶಿಲೆಯಾಗಿ ಜೀವಬಂದು ಓಡಾಡುತ್ತಿದೆ ಅನ್ನಿಸಿದ್ದರೂ, ಅದು ತನ್ನ ಭ್ರಾಂತಿಯಲ್ಲವೆನ್ನುವುದು ಕೆಲವೇ ಕ್ಷಣಗಳಲ್ಲಿ ಅವನಿಗೆ ತಿಳಿದುಹೋಯಿತು!
ಕೆತ್ತನೆಗಳಲ್ಲಿ ಎಲ್ಲಾ ನಾಜೂಕುಗಳನ್ನೂ ಅತಿ ಹತ್ತಿರದಿಂದಲೇ ನೋಡಿದ್ದ ಅವನಿಗೆ, ಈಗ ಅವುಗಳೇ ಆ ದೇಹದಲ್ಲಿ ಬಂದು ಆಶ್ರಯಿಸದ್ದನ್ನ ನೋಡಿ ಚಿತ್ತವನ್ನ ಬೇರೆಯದರೆಡೆ ಹೊರಳಿಸಲಾಗಲೇ ಇಲ್ಲ. 
ಹೃದಯವು ಮತ್ತೆ ಪ್ಲ್ಯಾಶ್ ಆಯಿತು!
ಅಲ್ಲಾಗಿದ್ದು ಅಂತಿಂತ ಪ್ಲ್ಯಾಶ್ ಅಲ್ಲ! ಹೃದಯದಲ್ಲೇ ಕಾಲ-ಕಾಲದಿಂದಲೂ ಹೊರಬರಲು ಕಾಯುತ್ತಿದ್ದ ಕಪ್ಪುರಂಧ್ರದಂತಿರುವ ಪ್ರೇಮದ ಸ್ಫೋಟದ ಪ್ರಖರತೆಯದು! ಆ ಬೆಳಕಲ್ಲಿ ಅವನಿಗೆ ಜಗತ್ತೇ ಮರೆಯಾಯಿತು!
ಆ ಬೆಳಕಿನಿಂದಲೇ ಆಗ ಕಟ್ಟಿದ್ದ ಪ್ರೇಮದ ಗೂಡಲ್ಲಿ ಈಗ ಬೆಳ್ಳಕ್ಕಿಯೊಂದು ಹಾರಿಬಂದು ಕುಳಿತಿತ್ತು!!
                             ***********************************
ಮನದ ಪ್ರೇಮದ ಭೇಗೆಗಳಿಗೆ ಔಷಧಿಯ ಲೇಪದಂತೆ ಅಲ್ಲಿ ಮುಂದೆ ಮುಂದೆ ಸಾಗುತ್ತಿದ್ದಳು ಬಿಳಿಯ ಹುಡುಗಿ. ಅವಳು ಎದುರು ಚಲಿಸುತ್ತಿರುವಾಗ, ಅವಳ ಬಣ್ಣ ಉಳಿದವರಿಗೆ ಅತೀ ಅನ್ನಿಸಿದರೂ ಹರಿಗೆ ಅದು ತಂಪನ್ನಕೊಡುವ ಬೆಳ್ಳಿಬೆಳದಿಂಗಳೇ.
“’ಪ್ರೇಮ ಕುರುಡುಎನ್ನುತ್ತಾರೆ! ಆದರೆ ನನ್ನ ಪ್ರೇಮವು ಹೇಗೆ ಇಷ್ಟು ಬಿಳುಪು!ಎಂದವನಿಗೆ ಅನ್ನಿಸಿದ್ದರೂ ಅನ್ನಿಸಿರಬಹುದು!
 ತನ್ನ ಮೊದಲ ಪ್ರೇಮವನ್ನ ಅನುಭವಿಸುತ್ತಿರುವ ಹರಿ, ತನ್ನ ಮನದ ಭಾವನೆಗಳನ್ನ ಹೇಗೆ ತಿಳಿಸಲಿ ಎಂದು ಯೋಚಿಸುತ್ತಲೇ ಪಕ್ಕದಲ್ಲೇ ತೆರಳುತ್ತಿರುವ ಹೆಂಗಸಿನ ಜಡೆಯಲ್ಲಿದ್ದ ಬಿಳಿಗುಲಾಬಿ ಕಂಡಿದ್ದೇ ಕ್ಷಣ, ಅದನ್ನೇ ಸೆಳೆದು ಅವಳ ಎದುರಿಗೆ ಹಿಡಿದೇ ಬಿಟ್ಟಿದ್ದ!!

ಉಪಸಂಹಾರ:
ಫೇಕ್.... ಫೇಕ್... ಫೇಕ್.... ಎಂದು ಅವನ ಮನದ ಮೂಲೆಯಲ್ಲೆಲ್ಲೋ ಕೂಗುತ್ತಿದ್ದ ಫೇಕ್ ಭೂತವೂ, ಅಲ್ಲೇ ಮೂಲೆಯಲ್ಲಿ ಬಿದ್ದಿರುವ ಭಿನ್ನ ವಿಗ್ರಹದಂತೆ ಪೆಚ್ಚಾಗಿ ಹರಿಯನ್ನೇ ನೋಡುತಿತ್ತು!! ಕಥೆಯೇ ಇಲ್ಲದವನಿಗೆ ಕಥೆ ಬರೆಯ ಹೊರಟ ಕಥೆಗಾರನಿಗೆ ಕೊನೆಯೇ ಸಿಗದೇ ಒದ್ದಾಡುತ್ತಿರುವಹಾಗೆಯೇ, ಹರಿಯ ಪ್ರೇಮ ಪ್ರಸಂಗವೂ ಮುಂಗಾರಿನ ಮಳೆಯಾಯಿತು!!

ಫೋಟೋ- ಗೋಪಾಲಕೃಷ್ಣ ಭಟ್.